
ಎಂದೂ ಬತ್ತದ ಪ್ರೀತಿಯ ಸಾಗರ
ಅಮ್ಮನ ಈ ಮಡಿಲು
ಸರಿಸಮವಿಹುದೇ ಅದರೆದುರು
ತುಂಬಿದ ಆ ಕಡಲು
ಬಾಯಲಿ ಹೇಳಲು ಕೈಯಲಿ ತೋರಲು
ಅಮ್ಮನ ಪ್ರೀತಿಯು ಮಿತಿಯೇನು?
ಅಳೆಯಲು ಹೋದರೆ ಜಗದಲಿ ಅದನು
ತೂಗುವ ತಕ್ಕಡಿಯಿದೆಯೇನು?
ಕೈಯಲಿ ಕಾಲಲಿ ತಲೆಯಲಿ ತನ್ನಯ
ಎದೆಯನು ಗುದ್ದುವ ಮಗುವನ್ನು
ಮುದ್ದಿಸಿ ಪ್ರೀತಿಲಿ ಹಾಲುಣಿಸುವಳು
ಮರೆಯುತ ತನ್ನಯ ನೋವನ್ನು
ಮಗುವಿನ ಕೂಗಿಗೆ ಕಿವಿಯಾಗುವಳು
ಗೆಲುವಲಿ ನಗುವಲಿ ತಾನೂ ನಗುವಳು
ಮಗುವಿನ ಕಣ್ಣೊಳಗಾಕೆಯ ಕನಸು
ಅಂತಹ ತಾಯಿಯ ಪಾದಕೆ ನಮಿಸು
ಅಮ್ಮ , ನಿನ್ನ ನಿಷ್ಕಲ್ಮಶ ಪ್ರೀತಿಗೆ ಸಾಟಿಯಿಲ್ಲ. ಈ ಹದಿನಾರು ಸಾಲುಗಳಲ್ಲಿ ನಿನ್ನನ್ನು ವರ್ಣಿಸುವಷ್ಟು ತಾಕತ್ತು ನನಗಿಲ್ಲ. ಜನ್ಮ ಕೊಟ್ಟಿದ್ದಕ್ಕೆ, ಪ್ರೀತಿ ನೀಡಿದ್ದಕ್ಕೆ, ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿದ್ದಕ್ಕೆ, ಸದಾ ಜೊತೆಗೆ ನಿಂತಿದ್ದಕ್ಕೆ, ನನ್ನ ಮೇಲಿಟ್ಟಿರುವ ನಂಬಿಕೆಗೆ ಹಾಗು ಮತ್ತೆಲ್ಲದ್ದಕ್ಕೂ ಚಿರರುಣಿ. ಇಂದು ಮೇ ೮, ಅಮ್ಮಂದಿರ ದಿನ. ಇದನ್ನು ಬರೆಯುತ್ತಿರುವಾಗ ನೀನು ಅಜ್ಜಿ ಮನೆಯಲ್ಲಿದ್ದೀಯ . I miss u mom... I love u.. ನೀನು ಇಲ್ಲದೇ ಇದ್ದರೂ ಮನೆಯ ಕೆಲಸಗಳೇನೋ ನಡೆಯತ್ತವೆ. ಆದರೆ ಮನಸ್ಸು ಮಾತ್ರ ಬಿಕೋ.. ಅನ್ನುತ್ತದೆ. "ನೀನೆ ಜಡೆ ಹಾಯ್ಕೋ. ಇಷ್ಟು ದೊಡ್ಡ ಆಯ್ದೆ. ಇನ್ನು ಜಡೆ ಹಾಕುಲೆ ಬತ್ತಿಲ್ಲೆ ಅಂದ್ರೆ ಯಾರಾದ್ರೂ ನಗಾಡ್ತೊ. ನಾಳೆಯಿಂದ ನಾನಂತೂ ಹಾಕ್ಕೊಡತ್ನಿಲ್ಲೆ." ಅನ್ನುವ ಅಮ್ಮ, ಮಾರನೇ ದಿನ ಬೆಳಿಗ್ಗೆ ಶಾಲೆಗೆ ಹೊರಡುವ ಗಡಿಬಿಡಿಯಲ್ಲೇ ನನಗಾಗಿ ಪುರುಸೊತ್ತು ಮಾಡಿಕೊಂಡು " ಬೇಗ ಬಾ.. ಜಡೆ ಹಾಕೀಕೆ ನಡೆತೆ" ಅನ್ನುವ ಮಗು ಮನಸ್ಸಿನ ಅಮ್ಮ ಮನೆಯಲ್ಲಿಲ್ಲದೆ ಇದ್ರೆ ದಿನದ ಸೂರ್ಯೋದಯ, ಸೂರ್ಯಾಸ್ತ ಎಲ್ಲ ವ್ಯರ್ಥ ಅನಿಸುತ್ತದೆ. ಮಕ್ಕಳ ತಾಯಂದಿರು, "ಟೀಚರ್, ನನ್ಮಗ/ ನನ್ಮಗಳು ನೀವ್ ರಜೆ ಮಾಡಿದ್ ದಿನ ಶಾಲೆಗೆ ಬತ್ತಿಲ್ಲ ಅಂತ್ರ್" ಅನ್ನುವುದನ್ನು ಕೇಳುವಾಗ ನಿನ್ನ ಬಗ್ಗೆ ಹೆಮ್ಮೆ ಅನಿಸುತ್ತೆ. ಜೊತೆಗೆ ನನಗಿಂತ ಹೆಚ್ಚು ಸಮಯ ನಿನ್ನ ಜೊತೆ ಕಳೆಯೋ ಆ ಮಕ್ಕಳ ಬಗ್ಗೆ ಸಣ್ಣ ಅಸೂಯೆ ಕೂಡಾ.. ಗೆಳತಿಯರು "ನಿನ್ ಅಮ್ಮ ಮನೇಲಿ ಅಷ್ಟು ಬೇಗ ಎದ್ದು ಅಡಿಗೆ ಎಲ್ಲ ಮುಗಿಸಿ ಶಾಲೆಗೆ ಹೋಗಿ ಬರ್ತಾರಲ್ಲ, Great" ಅಂದಾಗ ಕಣ್ಣಲ್ಲಿ ಮಿಂಚು ಮೂಡುತ್ತದೆ.
"ನನ್ನ ಮಗಳು ಪ್ರೈಝ್ ತಗೊಂಡಿದಾಳೆ" ಅಂತ ನೀನು ಸಂಬಧಿಕರೆದುರು ಹೇಳುವಾಗ ಅರಳುವ ನಿನ್ನ ಮುಖ ನನಗೆ ಗೆಲುವಿಗಿಂತ ಹೆಚ್ಚಿನ ಖುಶಿ ನೀಡುತ್ತದೆ. ಇನ್ನೂ ಏನೇನೋ ಹೇಳುವುದಿದೆ ಅಮ್ಮ.... ನೀನು ಎದುರಿಗಿರುವಾಗ ಯಾವತ್ತೂ ಹೇಳಲಾಗದ್ದು.. ನಿನ್ನ ಬಳಿ ಹೇಳದೆ ಮುಚ್ಚಿಟ್ಟಿದ್ದು.. ಭಾವನೆಗಳು ಶಬ್ದ ರೂಪಕ್ಕೆ ಅಥವಾ ಅಕ್ಷರ ರೂಪಕ್ಕೆ ಬದಲಾದರೆ ತನ್ನ ನವುರನ್ನು ಕಳೆದುಕೊಂಡುಬಿಡುತ್ತೇನೋ ಅನ್ನೋ ಭಯ.. ಅಮ್ಮ ನೀನು ಸದಾ ಖುಶಿಯಾಗಿರ್ಬೇಕು ಅನ್ನೋದೆ ನನ್ನ ಆಸೆ. ನಿನ್ನ ಬಿಟ್ಟಿರೋದು ತುಂಬಾ ಕಷ್ಟ ಆಗ್ತಿದೆ. ಬೇಗ ಬಂದ್ಬಿಡ್ತೀಯಲ್ಲ...
ಕೊಟ್ಟ ಮಾತಿನ ಪ್ರಕಾರ ಹೋಗಿ ಒಂದು ತಿಂಗಳ ಬಳಿಕ ರಜೆ ಹಾಕಿ ಮತ್ತೆ ಬಂದಿದ್ದ ಅವನು. ಮನೆಯಲ್ಲಿ ಒಪ್ಪಿಗೆ ಪಡೆದು ಅವನೊಡನೆ ನದಿ ತೀರಕ್ಕೆ ಹೋದವಳು ಅಲ್ಲಿಯೇ ಕುಳಿತು ದಡದಲ್ಲಿದ್ದ ಕಲ್ಲುಗಳನ್ನು ಹೆಕ್ಕಿ, ಒಂದೊಂದಾಗಿ ನೀರಿಗೆ ಬಿಸಾಡುತ್ತಾ ಒಮ್ಮೆ ಅವನತ್ತ ನೋಡಿ ದೀರ್ಘವಾಗಿ ಉಸಿರೆಳೆದುಕೊಂಡು ಮಾತು ಶುರು ಮಾಡಿದಳು. "ನೀನು ಅಲ್ಲಿ ಬಂದೂಕು ಹಿಡಿದು ಹೋರಾಡುತ್ತಿದ್ದರೆ ನಾನು ಇಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಕೂತಿದ್ದೆ. ಕ್ಷಣಕ್ಷಣವೂ ಏನಾಗುತ್ತೋ ಅಂತ ಆತಂಕ. ಎದೆಯ ಡಬ್ ಡಬ್ ಸದ್ದು ನಂಗೇ ಕೇಳಿಸುವಷ್ಟು ಜೋರಾಗಿತ್ತು. ಹೊಟ್ಟೆಗೆ ಏನು ತಿನ್ನುತ್ತಿದ್ದೆನೋ, ಕುಡಿಯುತ್ತಿದ್ದೆನೋ ನನಗೇ ಗೊತ್ತಿರಲಿಲ್ಲ. ನಿನಗೇನೂ ತೊಂದರೆ ಆಗದಿರಲಿ ಅಂತ ದೇವರೆದುರು ತುಪ್ಪದ ದೀಪ ಹಚ್ಚಿಟ್ಟು ನಂದದಂತೆ ಕಾಯುತ್ತಾ ಕೂತಿದ್ದೆ. ವಾರದ ಹಿಂದೆ ಮದರಂಗಿ ಹಚ್ಚಿಕೊಂಡಿದ್ದ ಕೈಗಳು ಗಡಗಡನೆ ನಡುಗುತ್ತಿದ್ದವು. ಟಿ.ವಿ. ಮುಂದೆ ಕೂರುವದಕ್ಕೂ ಧೈರ್ಯವಾಗ್ತಿರಲಿಲ್ಲ. "
" ಒಬ್ಬ ಸೈನಿಕನನ್ನು ಮದ್ವೆಯಾಗೋದಕ್ಕೆ ತುಂಬಾ ಧೈರ್ಯ ಬೇಕು ನಿಜ. ಯಾಕಂದ್ರೆ ಯಾವ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು. ಆದರೆ ನನಗೆ ನಿನ್ನ ಪ್ರೀತಿಸುವಾಗ ಇದ್ದ ಧೈರ್ಯ ಬತ್ತಿ ಹೋಗಿತ್ತು. ಹೆಚ್ಚು ದಿನ ರಜಾ ಸಿಗೋದಿಲ್ಲ, ಇನ್ನೊಂದು ತಿಂಗಳು ಬಿಟ್ಟು ಬರ್ತೀನಿ ಅಂತ ಹೇಳಿ ಹೋಗಿದ್ದ ನೀನು ಬರೋದೇ ಇಲ್ವೇನೋ ಅಂತ ಹೆದರಿ ರಾತ್ರಿಯೆಲ್ಲ ಕಣ್ಮುಚ್ಚುತ್ತಿರಲಿಲ್ಲ. ಅಪ್ಪ, ಅಮ್ಮ, ತಂಗಿ ಎಲ್ಲರೂ ಗಾಬರಿಯಾಗಿದ್ರು. ನಿನಗೆ ಗುಂಡಿನ ಸದ್ದೇ ಸುಪ್ರಭಾತ, ರಾತ್ರಿ ಅದೇ ಜೋಗುಳ. ಸಾವಿನ ಮನೆಯ ಪಕ್ಕದ ಸಣ್ಣ ಓಣಿಯಲ್ಲೇ ನಡೆಯುವವನು ನೀನು. ಆದ್ರೆ ನಂಗೆ ಇದೆಲ್ಲಾ ಹೊಸತು. ನಿನ್ನ ದನಿಯನ್ನು ಮತ್ತೆ ಕೇಳ್ತೀನೋ ಇಲ್ವೋ ಅಂತ ಆತಂಕ. ಹ್ರದಯ ಒದ್ದಾಡುತ್ತಿತ್ತು. ಕೊನೆಗೂ ಯುದ್ಧ ಮುಗಿದ ಸುದ್ದಿ ತಿಳಿದಾಗ ಮನಸ್ಸಿಗೆ ನೆಮ್ಮದಿ. ಜ್ವರ ಬಿಟ್ಟ ಮಗುವಿನ ಲವಲವಿಕೆ. ಅವತ್ತು ಸಂಜೆ ನೀನು ಫೋನ್ ಮಾಡಿದ್ಯಲ್ಲ.. ನಿನ್ನ ಮಾತು ಕೇಳಿದ ಖುಶಿಯಲ್ಲಿ ನನ್ನ ಕೊರಳಿಂದ ಸ್ವರವೇ ಹೊರಡಲಿಲ್ಲ. ಅಮ್ಮಂಗೆ ಫೋನ್ ಕೊಟ್ಟುಬಿಟ್ಟೆ. ಅವತ್ತು ಅಮ್ಮ ದೇವರಿಗೆ ಪಾಯಸ ನೈವೇದ್ಯ ಮಾಡಿದ್ಳು. " ಹೇಳಿ ಮುಗಿಸಿ ಅವನೆಡೆಗೆ ನೋಡಿದಳು. ಅವಳು ಮಾತಾದಾಗೆಲ್ಲ ಅವನು ಮೌನ. " ನೀ ಯಾಕೆ ಸುಮ್ಮನಿರ್ತೀಯಾ?" ಅಂತ ಅವಳೊಮ್ಮೆ ಕೇಳಿದ್ದಳು. ಆಗ ಅವನು "ನೀ ಮಾತಾಡ್ತಿದ್ದರೆ ಕೇಳ್ತಾನೇ ಇರ್ಬೇಕು ಅನಿಸತ್ತೆ. ಮಾತಾಡು" ಅಂದಿದ್ದ.
ಅವನು ಅವಳನ್ನೇ ನೋಡುತ್ತಾ ಕುಳಿತಿದ್ದ. ಅವಳು ಅವನೆಡೆಗೆ ತುಂಟ ನಗು ಬೀರುತ್ತಾ, "ನಿನಗೆ ನನ್ನ ನೆನಪಾಗಲಿಲ್ಲ್ವ?" ಕೇಳಿದಳು. "ತುಂಬಾ ನೆನಪು ಮಾಡಿಕೊಂಡೆ. ಜೀವನದಲ್ಲಿ ಮೊದಲ ಸಲ ಹೋರಾಡುವಾಗ ಹೆದರಿಕೆಯಾಗಿತ್ತು" ಅಂದ. ಅವನನ್ನೇ ಕಣ್ತುಂಬಿಕೊಳ್ಳುತ್ತಾ ಕುಳಿತಿದ್ದವಳು, "ಅಕ್ಕ" ಅಂತ ಕರೆದಿದ್ದು ಕೇಳಿ ಹಿಂದಿರುಗಿ ನೋಡಿದಳು. ಅಲ್ಲಿ ನಿಂತಿದ್ದ ತಂಗಿ, "ಅಮ್ಮ ಹೇಳಿದ್ರು, ಕತ್ತಲಾಯ್ತು.. ಬರಬೇಕಂತೆ" ಅಂದಳು. ಅದಾಗಲೇ ಚಂದ್ರ ಬಾನಿನಲ್ಲಿ ಮೂಡಿ ಬಂದಾಗಿತ್ತು. "ನಿನ್ನ ಜೊತೆ ಇದ್ರೆ ಸಮಯ ಹೋಗಿದ್ದೇ ಗೊತ್ತಾಗಲ್ಲ." ಹೇಳಿದಳು. "ನಂಗೂ ಅಷ್ಟೇ" ನಗುತ್ತಾ ಹೇಳಿದ ಅವನು. ಬಟ್ಟೆಗೆ ಮೆತ್ತಿದ್ದ ಧೂಳು ಕೊಡವಿಕೊಳ್ಳುತ್ತಾ ಇಬ್ಬರೂ ಎದ್ದು ನಿಂತರು.
ಅಮ್ಮನ ಸೀರೆಯಿದು
ಅಮ್ಮನ ಕೈಯ
ಮೆತ್ತನೆ ಸ್ಪರ್ಶವಿದೆ ಅದರಲ್ಲಿ
ಆಟಕ್ಕೆಂದು ನನ್ನ
ಪುಟ್ಟನೆ ಗೊಂಬೆಯ ಸಹ
ಸುತ್ತಿ ಮಲಗಿಸಿದ್ದೆ ಅದರಲ್ಲಿ
ಡ್ಯಾನ್ಸಿಗೆ ಸೀರೆ ಉಟ್ಟು
ಕನ್ನಡಿ ಮುಂದೆ ನಿಂತಾಗ
ಮೈಯಲ್ಲಿ ಹೊಸ ತರದ ಪುಳಕ
ಅಮ್ಮನಿಗೆ ಕಾಣದಂತೆ
ಮತ್ತೆ ಮತ್ತೆ ಕದ್ದು ಮುಚ್ಚಿ
ಸೀರೆ ಉಡುವ ತವಕ
ತಪ್ಪು ತಪ್ಪಾಗಿ ತಿರುಗಿಸಿ
ಉಟ್ಟ ಸೀರೆ ಬಿಚ್ಚಿ ಬಿದ್ದಾಗ
ಮುಖದಲ್ಲೊಂದು ಪೆಚ್ಚು ನಗೆ
ಆದರೂ ಬಿಡದೆ ಮತ್ತೆ ಸೀರೆ ಉಟ್ಟು
ಅಮ್ಮನದೇ ನೋಟ, ನಡಿಗೆ
ನಾನೇ ಅಮ್ಮನಾದ ಹಾಗೆ
ಅಮ್ಮನ ಸೀರೆಯಲ್ಲಿ ಇನ್ನೂ
ಹಿತವಾದ ಸುಖ, ಸಾಂತ್ವನವಿದೆ
ಎಂದು ಅರಿವಾದಾಗ ಹನ್ನೆರಡು ವರ್ಷ
ಅಮ್ಮನ ಪ್ರೀತಿ, ಆರ್ದ್ರತೆ,
ಕನಸು, ನೋವು, ತಾಳ್ಮೆ ಎಲ್ಲ
ತಿಳಿಯುವಾಗ ಹದಿನೆಂಟು ವರ್ಷ
ಈಗ ಅಮ್ಮನ ಸೀರೆ
ಸ್ವಲ್ಪ ಹಳತಾಗಿದೆ
ಆದರೆ ಆ ಹಿತವಾದ ಸ್ಪರ್ಶ
ಇನ್ನೂ ಹೆಚ್ಚು ಮೆಚ್ಚಾಗಿದೆ .
ಅವಳು ಮೊನ್ನೆ ಬಟ್ಟೆಯಂಗಡಿಯಲ್ಲೂ ಸಿಕ್ಕಿದ್ದಳು. ಅವಳನ್ನು ಕಂಡಿದ್ದೇ ನಂಗೆ ಪರಿಚಿತ ಮುಖ ಅನ್ನಿಸಿತು. ಮತ್ತೆ ಮತ್ತೆ ಪ್ರಯತ್ನಿಸಿ ನೆನಪು ಮಾಡಿಕೊಂಡೆ. ’ಹೌದು, ಅವಳೇ ಇವಳು’ ಅನಿಸಿತು. ’ಅಲ್ಲದೇನೂ ಇರಬಹುದು’ ಮತ್ತೊಂದು ಮನಸ್ಸು ಹೇಳಿತು. ನನ್ನ ಜೊತೆ ೧ ನೇ ಕ್ಲಾಸ್ ನಲ್ಲಿ ಕಲೀತಿದ್ದವಳು. ನಂತರ ನಾವು ಬೇರೆ ಊರಿಗೆ ಹೋಗಿದ್ದರಿಂದ ಅವಳ ಜೊತೆ ಸಂಪರ್ಕ ಇರಲಿಲ್ಲ. ನಾವು ಭೇಟಿಯಾಗದೇ ೧೨ ವರ್ಷಗಳಾಗಿದ್ದವು. ಮೊದಲಿಗಿಂತ ಎತ್ತರವಾಗಿದ್ದಳು. ದಪ್ಪವಾಗಿದ್ದಳು. ಆದರೆ ಅವಳ ಮುಖದ ಮೇಲಿನ ಆ ಕಪ್ಪು ಮಚ್ಚೆ ನೋಡಿದ ಮೇಲೆ ನಂಗೆ ಯಾವ ಅನುಮಾನವೂ ಉಳಿದಿರಲಿಲ್ಲ. ’ಗುರುತು ಸಿಕ್ಕಿಲ್ಲದಿರಬಹುದು’ ಅನ್ನಿಸಿ ನನ್ನತ್ತಲೇ ನೋಡಿದ ಅವಳನ್ನು ನೋಡಿ ಚಿಕ್ಕದಾಗಿ ನಕ್ಕೆ. ಅವಳೂ ನಕ್ಕಳು. ಅಥವಾ ನಂಗೆ ಹಾಗನಿಸಿತು. ನಾನು ಅವಳ ಕಡೆಗೇ ನೋಡುತ್ತಿದ್ದೆ. ಅವಳು ೨-೩ ಬಾರಿ ನನ್ನೆಡೆಗೆ ನೋಡಿದಳು. ತುಟಿಯಂಚಿನಲ್ಲೇ ನಕ್ಕಳು. ಅವಳು ಓರೆ ನೋಟದಿಂದ ನನ್ನತ್ತ ಗಮನಿಸುತ್ತಿದ್ದಾಳೆ ಅಂತ ನನಗನಿಸುತ್ತಿತ್ತು. ಗುರುತು ಹಿಡಿದು ಈಗ ಅವಳಾಗೇ ಮಾತಾಡಿಸುತ್ತಾಳೆ ಅಂತ ಕಾದಿದ್ದೇ ಬಂತು. ಅವಳು ಬಟ್ಟೆ ಪ್ಯಾಕ್ ಮಾಡಿಸಿಕೊಂಡು ಕೌಂಟರಿನಲ್ಲಿ ದುಡ್ಡು ಕೊಟ್ಟು ಹೊರಟೇ ಬಿಟ್ಟಳು. ಆಗ ಒಂದು ಕ್ಷಣ ನನ್ನ ಮನಸ್ಸಿನಲ್ಲಿ ’ಇವಳು ಅವಳ ಹಾಗೇ ಇರುವ ಬೇರೆ ಯಾರೋ ಆಗಿರಬಹುದೇ?’ ಅನ್ನಿಸಿತು. ಹಾಗಾಗಿ ನಾನಾಗೇ ಮಾತನಾಡಿಸಲು ಹೋಗದೆ ಸುಮ್ಮನಿದ್ದು ಬಿಟ್ಟೆ.
ಇಂದು ಈ ಜಾತ್ರೆಯ ಜನಸಂದಣಿಯಲ್ಲಿ ಅವಳ ಮುಖ ಕಾಣಿಸಿದ ಮೇಲೆ ’ಇವಳು ನನ್ನ ಆ ಬಾಲ್ಯದ ಗೆಳತೀನೇ’ ಅನ್ನೋ ಭಾವನೆ ಮನಸ್ಸಿನಲ್ಲಿ ಮೂಡಿ, ನನ್ನ - ಅವಳ ಭೇಟಿ ದೈವ ನಿಶ್ಚಯ ಅನ್ನಿಸಿಬಿಟ್ಟಿತು. ಅವಳನ್ನು ಮಾತನಾಡಿಸಲೇ ಬೇಕೆಂಬ ಉತ್ಕಟ ಹಂಬಲ ತಡೆಯಲಾರದೇ ಅವಳು ನಿಂತಿದ್ದ ಬಳೆಯಂಗಡಿಯಕಡೆ ನೋಡುತ್ತಾ ನಿಂತೆ. ರಥದ ಎದುರು ನಿಂತು ಇನ್ನೆಲ್ಲೋ ನೋಡುತ್ತಿದ್ದ ನನ್ನನ್ನು ಕಂಡ ಅಮ್ಮ ’ಏನೇ?’ ಅಂತ ಕಣ್ಣಲ್ಲೇ ಪ್ರಶ್ನಿಸಿದರು. ’ಈಗ ಬಂದೆ. ಇಲ್ಲೇ ಇರು’ ಅನ್ನುತ್ತಾ ಆ ಜನ ಸಂದಣಿಯ ನಡುವೆ ದಾರಿ ಮಾಡಿಕೊಂಡು ಅವಳು ನಿಂತಿದ್ದ ಬಳೆಯಂಗಡಿ ಸಮೀಪಿಸಿ, ಸಲಿಗೆಯಿಂದ ಅವಳ ಬೆನ್ನ ಮೇಲೆ ಕೈಯಿಟ್ಟು, ’ಹಾಯ್’ ಎಂದೆ. ಫಕ್ಕನೆ ಹಿಂದೆ ತಿರುಗಿದ ಅವಳು ನನ್ನತ್ತ ಅಪರಿಚಿತರನ್ನು ನೋಡುವ ನೋಟ ಬೀರಿದಳು. ನಾನು ನಗುತ್ತಾ, ’ಗುರುತು ಸಿಗಲಿಲ್ವ? ನಾನು ಕಣೇ.. ೧ ನೇ ಕ್ಲಾಸ್ ನಲ್ಲಿ ನಿನ್ನ ಪಕ್ಕ ಕುಳಿತುಕೊಳ್ತಿದ್ನಲ್ಲ’ ಅಂದೆ. ನಿಜವಾಗಿಯೂ ನೆನಪಾಯಿತೋ, ಅಥವಾ ಸುಮ್ಮನೆ ಹಾಗೆ ನಟಿಸಿದಳೋ.. ’ಓಹ್.. ಹಾಂ.. ಗೊತ್ತಾಯ್ತು’ ಅಂದಳು. ’ಚೆನ್ನಾಗಿದಿಯಾ?’ ಕೇಳಿದೆ. ’ಹೂಂ’ಅಂದಳು. ’ಈಗ ಇದೇ ಊರಿನಲ್ಲಿದ್ದೀಯಾ?’ ಕೇಳಿದೆ. ’ಹುಂ.. ಹುಂ’ ಅಂದಳು. ’ಮನೇಲಿ ಎಲ್ಲ ಆರಾಮಿದ್ದಾರ?’ ಕೇಳಿದೆ. ಅದಕ್ಕೂ ’ಹುಂ’ ಅಂದಳು. ’ಏನು ಓದ್ತಿದ್ದ್ದಿಯ?’ ಕೇಳಿದೆ. ’ಓದು ನಿಲ್ಲಿಸಿಬಿಟ್ಟೆ. ಕೆಲಸಕ್ಕೆ ಹೋಗ್ತಿದೀನಿ.’ ಅಂದಳು. ’ ನಿನ್ನ ತಮ್ಮ ಏನ್ ಮಾಡ್ತಿದ್ದಾನೆ?’ ಕೇಳಿದೆ. ’ತಮ್ಮ ಅಲ್ಲ, ತಂಗಿ.. ೧೦ ನೇ ಕ್ಲಾಸ್ ಅವಳು’ ಅಂದಳು. ’ಅರೇ.. ಇವಳಿಗೆ ತಮ್ಮ ಇದ್ದಿದ್ದಲ್ವಾ’ ಅಂದುಕೊಂಡವಳು, ನನ್ನ ನೆನಪೇ ಸರಿಯಿಲ್ಲವೇನೋ ಅಂತ ಸಮಾಧಾನ ಮಾಡಿಕೊಂಡೆ. ಅವಳ ಚುಟುಕಾದ ಉತ್ತರಗಳಿಂದ, ಅವಳಿಗೆ ನನ್ನ ಹತ್ತಿರ ಮಾತಾಡುವುದು ಇಷ್ಟವಿಲ್ಲವೇನೋ ಅನಿಸಿ, ’ಸರಿ ಹಾಗಾದ್ರೆ. ಇನ್ನೊಮ್ಮೆ ಸಿಗೋಣ. ನಮ್ಮನೆಗೆ ಬಾರೇ ಒಮ್ಮೆ.’ ಅಂದೆ. ಅವಳು ತುಟಿಯಂಚಿನಲ್ಲಿ ನಗು ಬೀರುತ್ತಾ ’ಖಂಡಿತ.. ಬಾಯ್’ ಅಂತ ಶುಭ ವಿದಾಯ ಹೇಳಿದಳು. ಅವಳು ಸೌಜನ್ಯಕ್ಕಾದರೂ ನನ್ನ ಬಗ್ಗೆ ಏನೂ ವಿಚಾರಿಸದಿದ್ದುದು ನಂಗೆ ಆಶ್ಚರ್ಯ ಹುಟ್ಟಿಸಿತಾದರೂ, ನಾನಾಗೇ ಏನೂ ಹೇಳಲಿಲ್ಲ. ವಿದಾಯ ಹೇಳಿ ಆ ರಶ್ ನಲ್ಲೇ ಮಧ್ಯೆ ಸ್ಥಳ ಮಾಡಿಕೊಳ್ಳುತ್ತಾ, ಅಮ್ಮನ ಬಳಿ ಬಂದು ನಿಂತೆ. ’ಯಾರದು?’ ಕೇಳಿದಳು ಅಮ್ಮ. ’ನನ್ನ ಹಳೆ ಫ್ರೆಂಡ ಅವಳು’ ಅಂದೆ. ’ ರಥವನ್ನು ನೋಡುತ್ತಾ ಅಮ್ಮ, ’ಅಲ್ನೋಡೆ. ರಥದ ತುದಿಯನ್ನ’ ಅಂದರು. ಕತ್ತೆತ್ತಿ ರಥದ ತುದಿಯನ್ನು ದಿಟ್ಟಿಸಿದೆ. ನಂಗೆ ಅಲ್ಲಿ ಅವಳ ಮುಖವೇ ಕಾಣಿಸ್ತಿತ್ತು.
ಅಪ್ಪಂಗೂ ನಂಗೂ ಮಾತಿಲ್ಲದೆ ೪-೫ ದಿನಗಳಾಗಿದ್ದವು. ಯಾವತ್ತೂ ಹೀಗಿರಲಿಲ್ಲ ಅಪ್ಪ. ನಂಗೆ ದೊಡ್ಡ ದನಿಯಲ್ಲಿ ಜೋರು ಮಾಡಿದವರೂ ಅಲ್ಲ. ನಾನು ಹೇಳಿದ್ದಕ್ಕೆಲ್ಲ ಹೂಂ ಗುಟ್ಟುತ್ತ , ನನ್ನ ಪ್ರತಿ ಮಾತಿಗೂ ಪ್ರೋತ್ಸಾಹ ಕೊಡುತ್ತ ನನ್ನನ್ನು ಸಮರ್ಥಿಸ್ತಿದ್ದರು. ಅಪ್ಪನ ಜೊತೆ ನಾನು ಎಷ್ಟೆಲ್ಲ ವಿಷಯಗಳನ್ನು ಮಾತಾಡ್ತಿದ್ದೆ. ನಾನು ಕಟ್ಟಿಕೊಂಡ ಕಲ್ಪನೆಯ ಆದರ್ಶಗಳ ಬಗ್ಗೆನೂ ಹೇಳ್ತಿದ್ದೆ. ಅವರು ನನ್ನ ಯಾವ ಮಾತನ್ನೂ ವಿರೋಧಿಸ್ತಿರಲಿಲ್ಲ. ನನ್ನ ಅಭಿಪ್ರಾಯಗಳಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ನನ್ನ ಕಲ್ಪನೆಯ ಹೂವಿಗೆ ವಾಸ್ತವದ ಬಿಸಿ ತಾಗಿ ಅದು ಬಾಡುವುದು ನಂಗೆ ಬೇಕಿರಲಿಲ್ಲ. "ನಾನು ಹೇಳಿದ್ದಕ್ಕೆಲ್ಲ ಅಪ್ಪ ಒಪ್ಪಬೇಕು, ಒಪ್ತಾರೆ " ಅಂದ್ಕೊಂಡಿದ್ದೆ.
ಏಕಾಏಕಿ ಹೀಗಾದಾಗ ನಂಗೆ ತುಂಬಾ ಬೇಸರವಾಗಿತ್ತು. ಅಪ್ಪನ ಬಗ್ಗೆ ಯಾವತ್ತೂ ಇಲ್ಲದ ಸಿಟ್ಟು ಬಂದಿತ್ತು. ಸಮಾಜಕ್ಕೆ, ಸಂಪ್ರದಾಯಗಳಿಗೆ ಹೆದರಿ ಅಪ್ಪ ನನ್ನ ಪರ ವಹಿಸ್ತಿಲ್ಲ ಅನ್ನೋ ಕಾರಣ ನನ್ನ ರೋಷಕ್ಕೆ ಇನ್ನಷ್ಟು ತುಪ್ಪ ಸುರಿದಿತ್ತು. ಯಾರಿಗೂ ಹೇಳದೆ ಮನೆ ಬಿಟ್ಟು ಹೋಗ್ಬಿಡಬೇಕು ಅಂದ್ಕೊಂಡೆ. ಆದ್ರೆ ಅದು ನನ್ನಿಂದ ಸಾಧ್ಯವಾ? ಖಂಡಿತಾ ಇಲ್ಲ ಅನಿಸ್ತು. ನಾನು ಯಾರ ಮೇಲಾದರೂ, ಹೇಗಾದರೂ ಸಿಟ್ಟು ಹೊರಹಾಕಿ ಶಾಂತವಾಗಬೇಕಿತ್ತು. ಅಂಗಳದಲ್ಲಿದ್ದ ಕಲ್ಲನ್ನೆಲ್ಲ ಹೆಕ್ಕಿ ಬೀಸಿ ಬೀಸಿ ಒಗೆಯುತ್ತಾ ಕುಳಿತೆ.
ಅಪ್ಪ ನನ್ನ ಜೊತೆ ಮಾತು ಬಿಟ್ಟಿದ್ದಷ್ಟೇ ಅಲ್ಲ, ನನ್ನ ಎದುರು ಬರುವುದನ್ನೇ ಕಡಿಮೆ ಮಾಡಿದ್ದರು. ಅಕಸ್ಮಾತ್, ಎದುರು ಬಂದರೂ ಯಾವುದೋ ವೈರಿಯನ್ನು ನೋಡಿದಂತೆ ನೋಡಿ ಹೊರಟು ಹೋಗ್ತಿದ್ದರು. ಅಮ್ಮನಂತೂ ಹೆಚ್ಚು ಮಾತೇ ಆಡ್ತಿರಲಿಲ್ಲ. ಯಾವಾಗಲೂ ಪಟ ಪಟ ಅಂತ ಮಾತಾಡ್ತಿರ್ತಿದ್ದ ಅಮ್ಮ ಹೀಗೆ ಮೌನವಾಗಿರುವುದಕ್ಕೆ ನಾನೇ ಕಾರಣ ಅನ್ನೋ ಗಿಲ್ಟ್ ಒಳಗೊಳಗೇ ಕಾಡ್ತಿತ್ತು. ಆದರೂ ನಾನು ಹಠ ಬಿಟ್ಟಿರಲಿಲ್ಲ. ನಾನೂ ಅಪ್ಪನ ಮಗಳಲ್ಲವಾ? ನಾನಾಗೇ ಯಾಕೆ ಮಾತಡಿಸಲಿ? ಯಾಕೆ ತಪ್ಪು ಅಂತ ಒಪ್ಪಿಕೊಂಡು ಕ್ಷಮೆ ಕೇಳಲಿ? ಅದು ego ನಾ, ಸ್ವಾಭಿಮಾನನಾ? ಅಥವಾ ದಿಟ್ಟ ನಿರ್ಧಾರಗಳಿಗಾಗಿ ಯಾರನ್ನಾದ್ರೂ ಎದುರು ಹಾಕಿಕೊಳ್ಳುವ ಧೈರ್ಯನಾ? ಒಟ್ಟಿನಲ್ಲಿ ನಾನೂ ಸೋಲಲು ಸಿದ್ಧಳಿರಲಿಲ್ಲ. ಅಣ್ಣ ಈ ಸಮಾಜದ ಕಟ್ಟಳೆಗಳನ್ನ ಯಾವತ್ತೋ ಧಿಕ್ಕರಿಸಿದ್ದ. ಅವನೊಬ್ಬನೇ ಸದಾ ನನ್ನ ಜೊತೆ ನಿಂತು ಧೈರ್ಯ ತುಂಬೋನು ಅನಿಸ್ತಿತ್ತು.
ಮೊನ್ನೆ ಒಂದಿನ ನಾನು ಹೀಗೆ ಹೊರಗಡೆ ಕುಳಿತು ಕಲ್ಲೆತ್ತಿ ಒಗೆಯುತ್ತಿರುವಾಗ, ಒಳಗಡೆ ಕೋಣೆಯಲ್ಲಿ ಅತ್ತಿಗೆಗೂ, ಅಮ್ಮಂಗೂ ಜಗಳ ಶುರುವಾಯ್ತು. ಜಗಳ ಮುಂದುವರಿದು ಇಬ್ಬರ ಧ್ವನಿಯೂ ಜೋರಾಗತೊಡಗಿದಾಗ ನನ್ನ ಕಿವಿಗೂ ತಟ್ಟಿತು. ಒಳಗೆ ಓಡಿದೆ. ಅಮ್ಮ ಸಿಟ್ಟಿನಲ್ಲಿ ಕೂಗಾಡ್ತಿದ್ದರು. ಮುಖವೆಲ್ಲ ಕೆಂಪಾಗಿತ್ತು. ನಾನು ಬಾಗಿಲಲ್ಲೇ ನಿಂತೆ. ನಂಗೆ ಜಗಳದ ತಲೆ ಬುಡ ಅರ್ಥವಾಗಿರಲಿಲ್ಲ. ಅತ್ತಿಗೆ ತಲೆ ಕೆಳಗೆ ಹಾಕಿ ನಿಂತಿದ್ದರೂ ದನಿ ಜೋರಾಗಿಯೇ ಇತ್ತು. ನಂಗೆ ವಿಷ್ಯ ಏನೂಂತ ಗೊತ್ತಾಗದೇ ಯಾರ ಪರ ವಹಿಸುವುದು ಸಾಧ್ಯವಿರಲಿಲ್ಲ. ನಾನು ಒಳಬಂದಿದ್ದು ನೋಡಿ ಅಮ್ಮ ಮಾತು ನಿಲ್ಲಿಸಿಬಿಟ್ಟರು. ಅತ್ತಿಗೆ ತಲೆ ಕೆಳಗೆ ಹಾಕಿಯೇ ಏನೋ ಗೊಣಗಿಕೊಂಡರು. "ಏನಾಯ್ತು?" ಕೇಳಿದೆ ಅಮ್ಮನ ಹತ್ರ. "ಏನೂ ಇಲ್ಲ ಬಿಡು" ಅನ್ನುತ್ತಾ ಆಚೆ ಹೊರಟು ಹೋದರು. ಅತ್ತಿಗೆಯ ಹತ್ತಿರ ಕೆಳಿದರೆ ಅವರೂ, "ಏನೂ ಇಲ್ಲ" ಅನ್ನುತ್ತಾ ಕೋಣೆಗೆ ಹೋಗಿಬಿಟ್ಟರು. ಅವರು ನನ್ನ ವಿಷ್ಯವಾಗಿಯೇ ಜಗಳಡುತ್ತಿದ್ದಿರಬಹುದಾ? ಅನಿಸಿತು. ಕೋಣೆಗೆ ಹೋಗಿ ನೆಲ ನೋಡುತ್ತಾ ಕುಳಿತೆ.
ಅವತ್ತು ಸಂಜೆ ಅಂಗಳದಲ್ಲಿ ಕುಳಿತು ಯಾವತ್ತಿನ ಹಾಗೆ ಕಲ್ಲು ಒಗೆಯುತ್ತಿರುವಾಗ ಅಪ್ಪ ಒಳ ಬಂದರು. ವಾರೆಗಣ್ಣಲ್ಲೇ ನೋಡಿದೆ. ಅವರು ಇಡುತ್ತಿದ್ದ ಹೆಜ್ಜೆ ಕಂಡೇ, ಅವರು ಇವತ್ತು ಸಿಟ್ಟು ಮಾಡ್ಕೊಂಡಿಲ್ಲ ಅಂತ ಗೊತ್ತಾಗಿ ಹೋಯ್ತು. ಆಶ್ಚರ್ಯವಾಯ್ತು. ದಿನಾ ಹೀಗೆ ೫೦ ಕಲ್ಲಾದರೂ ಒಗೆದು ಸಿಟ್ಟು ತೀರಿಸಿಕೊಳ್ಳಬೇಕು ಅಂದ್ಕೊಂಡಿದ್ದೆ. ಅವತ್ತು ಲೆಕ್ಕ ತಪ್ಪಿ ಹೋಯ್ತು. ಆಪ್ಪ, ಅಮ್ಮನ ಹತ್ತಿರ ಏನು ಹೇಳ್ತಿರಬಹುದು ಕೇಳೋಣ ಅಂದುಕೊಂಡು ಶಬ್ಧ ಮಾಡದೇ ಒಳಗೆ ಬಂದೆ. ಅಪ್ಪ, ಅಮ್ಮನ ಹತ್ರ ಹೇಳ್ತಿದ್ದರು," ಆ ಹುಡ್ಗ ನಮ್ಮ ಜಾತಿನೇ ಅಂತೆ. ನಿಜವಾಗಿ ನೋಡಿದ್ರೆ ನಂಗೆ ದೂರದ ಸಂಬಂಧಿ ಆಗ್ಬೇಕು. ಮನೆಯವರೂ ಎಲ್ಲಾ ಒಳ್ಳೆಯವ್ರು. ಒಳ್ಳೆಯ ಸಂಬಂಧ." ನಂಗೆ ಒಮ್ಮೆಲೆ ಖುಶಿಯಾಯಿತು ಅಪ್ಪ ಒಪ್ಪಿದ್ರಲ್ಲ ಅಂತ. ಪಕ್ಕನೆ, ’ಅಪ್ಪ ಹುಡುಗ ತಮ್ಮದೇ ಜಾತಿ ಅನ್ನೋ ಕಾರಣಕ್ಕೆ ಒಪ್ಪಿದರೆ ವಿನಾ ಮಗಳು ಪ್ರೀತಿಸ್ತಿದಾಳೆ ಅಂತಲ್ಲ’ ಅನ್ನೋದು ಹೊಳೆದು ನಿಂತ ನೆಲ ತಿರುಗಿದ ಹಾಗಾಯ್ತು. ಅಪ್ಪ ಮಗಳು ಪ್ರೀತಿಸಿದ ಹುಡುಗ ತಮ್ಮದೇ ಜಾತಿ ಎಂದು ತಿಳಿದು ಸಂಭ್ರಮಿಸ್ತಿದ್ದರೆ, ನಂಗೆ ಅಪ್ಪನ ಮೇಲೆ ಇದ್ದ ಗೌರವವೆಲ್ಲ ಕರಗುತ್ತಿತ್ತು. ಅಪ್ಪ ಯಾಕೆ ಹೀಗೆ? ಅರ್ಥವಾಗಲಿಲ್ಲ. ಅಕಸ್ಮಾತ್ ಹುಡುಗ ಬೇರೆ ಜಾತಿಯಾಗಿದ್ದರೆ?.... ನಾನೆ ಬೀಸಿ ಒಗೆದ ಕಲ್ಲುಗಳು ಬಂದು ಮತ್ತೆ ನನ್ನ ತಲೆಗೇ ಬಡಿದ ಹಾಗಾಗುತ್ತಿತ್ತು. ನಾನು ವಿಚಿತ್ರ ಉಮ್ಮಳದಲ್ಲಿ ಬಿಕ್ಕಿ ಬಿಕ್ಕಿ ಅತ್ತೆ. ಅಪ್ಪ ಖುಶಿಯಿಂದ ಈ ವಿಷ್ಯ ಹೇಳಲು ನನ್ನ ಕೋಣೆಗೆ ಬಂದವರು, ನನ್ನ ಹೊಸ ಥರದ ವರ್ತನೆ ಅರ್ಥವಾಗದೆ, ಆತಂಕದಲ್ಲಿ ಪಕ್ಕದಲ್ಲಿದ್ದ ಅಮ್ಮನ ಮುಖ ನೋಡಿದರು. ಅಮ್ಮ, ಒಡೆದು ಹೋದ ನನ್ನ ಮನಸನ್ನು, ನನ್ನ ಕಣ್ಣೀರಿನ ಹನಿಗಳಲ್ಲಿ ಹುಡುಕಲು ಯತ್ನಿಸುತ್ತಿದ್ದಳು.
ಅಪ್ಪ ಬೆಳೆಯುತ್ತಿದ್ದಾನೆ
ಒಂದೇ ಸಮನೆ ಉದ್ದಾನುದ್ದ
ಬಿದಿರು ಮೆಳೆಯಂತೆ
ಗಾಳಿ ಮರದ ಕೊಂಬೆಯಂತೆ
ಎಲ್ಲ ಅಳತೆಗಳ ಮೀರಿ
ನಾನು ನೋಡ ನೋಡುತ್ತಿದ್ದಂತೆ
ಏಕ್ ದಂ........
ಅವನು ಬದಲಾಗಿದ್ದಾನಾ?
ತಿಳಿಯುತ್ತಿಲ್ಲ ನನಗೆ
ನನ್ನ ತಿಳಿವಿಗೆ ಮೀರಿ ಏರಿದ್ದಾನೆ
ಆಗಸದೆತ್ತರಕ್ಕೆ ಶಿಖರದಂತೆ
ನಾನು ನೆಲದ ಮೇಲಿನ ಹುಲ್ಲು
ಅವನ ನಿಲುಕಲಿ ಹೇಗೆ?
ಅಪ್ಪ.... ಅಪ್ಪ.....
ಕರೆದಿದ್ದು ಕೇಳಿಸಿರಬಹುದಾ?
ಅಪ್ಪನೇ ಹೌದಾ?
ಯಾಕೋ ಒಂಥರಾ ಕಳವಳ,
ವ್ರಥಾ ಗಾಬರಿ
ನಾವೆಲ್ಲ ಇಲ್ಲೇ ಹೀಗೆ ಇರುವಾಗ
ಅದು ಹೇಗೆ ಅಪ್ಪ ಬೆಳೆದುಬಿಟ್ಟ?
ಅರೇ... ನನ್ನನ್ನೇ ಕರೆಯುತ್ತಿದ್ದಾನೆ
ಕೈ ಚಾಚುತ್ತಿದ್ದಾನೆ
ತನ್ನ ಹಾಗೆ ಬೆಳೆಯಲಿ ಅಂತ
ನನಗಿನ್ನೂ ಜಾರುವ ನೆಲದ್ದೇ ಚಿಂತೆ.
ಜಾತ್ರೆಯಲ್ಲಿ ಕೊಂಡ ಪುಟ್ಟ
ಪರ್ಸಿನ ಒಳಗೆ ಇನ್ನೂ ಆ
ಬೆಣಚುಗಲ್ಲಿನದೇ ನುಣುಪು
ನನ್ನೊಳಗೆ ನಾನು
ಉರಿದದ್ದೇ ಬಂತು
ನೆನಪುಗಳು ಆರುತ್ತಲೇ ಇಲ್ಲ
ನೆನೆದಾಗೆಲ್ಲ ಮೈ ಕಾವು
ಬೆತ್ತಲೆಯ ಸುತ್ತಿಕೊಂಡ
ಮೆತ್ತನೆಯ ರಾತ್ರಿಗೆ
ಉರಿ ಉರಿ ಸೂರ್ಯನ ನೆನಪು
ಬೆಳದಿಂಗಳು ನಗುವಾಗೆಲ್ಲ
ನಂಗೆ ಚಂದ್ರನ ಮೇಲೆ
ಹೊಟ್ಟೆಕಿಚ್ಚು
ಕತ್ತಲ ರಾತ್ರಿಯೇ ಅಲ್ಲವೇ
ನನ್ನ ಹೂವಾಗಿ ಅರಳಿಸಿದ್ದು
ಹುಣ್ಣಿಮೆಗೆ ಸವಾಲೆಸೆವಂತೆ
ಅಮಾವಾಸ್ಯೆಯ ರಾತ್ರಿ
ಅಲೆಗಳು ಭೋರ್ಗರೆವಾಗೆಲ್ಲ
ನನಗೇನೋ ಹುರುಪು.
" ಅಕ್ಕಾ.. ತಗೊಳ್ಳಿ ಅಕ್ಕ, ಎಲ್ಲಾ ಫ್ರೆಶ್ ಹಣ್ಣುಗಳು ಅಕ್ಕ... ನೋಡಿ ಎಷ್ಟು ಚೆನ್ನಾಗಿವೆ" ಹಣ್ಣುಗಳನ್ನು ತೋರಿಸುತ್ತಾ ಹೇಳುತ್ತಿದ್ದ ಆ ಹುಡುಗ. "ಕಿತ್ತಳೆ ಕಿಲೊಗೆ ಎಷ್ಟಪ್ಪಾ?" ಕೇಳಿದಳು ಅವಳು. "40 ಅಕ್ಕಾ... ಒಳ್ಳೇದಿದೆ. 35 ಕ್ಕೆ ಬೇಕಾದ್ರೆ ಕೊಡ್ತೀನಿ" ಮತ್ತೆ ಒತ್ತಾಯಿಸತೊಡಗಿದ. ಬೆಲೆ ಕೇಳುತ್ತಲೇ ಅವಳ ಎದೆ ಹೊಡಕೊಳ್ಳತೊಡಗಿತು. ಬೆವರು ಸುರಿಸಿ ಪೈಸೆ ಪೈಸೆ ಒಟ್ಟು ಮಾಡ್ತಿರೋ ಅವಳು ಇಷ್ಟು ಬೆಲೆಯ ಹಣ್ಣು ಕೊಂಡು ತಿಂದರೆ ಅದರ ರುಚಿ ಅನುಭವಿಸೋದು ಸಾಧ್ಯಾನೇ ಇರಲಿಲ್ಲ. " ಬೇಡಪ್ಪ" ಎಂದಳು ಆ ಹುಡುಗನಿಗೆ.
ಡ್ರೈವರ್ ಇನ್ನೂ ಬಂದಿರಲಿಲ್ಲ. ನಿಂತ ಬಸ್ಸಿನಲ್ಲಿ ಗಾಳಿಯೂ ಬೀಸುತ್ತಿರಲಿಲ್ಲ. ಸೆಖೆ ಬೇರೆ. ಮೈಯೆಲ್ಲಾ ಬೆವರುತ್ತಿತ್ತು. ಆ ಹುಡುಗ ಅಲ್ಲೆ ನಿಂತು, " ತಗೊಳ್ಳಿ ಅಕ್ಕ, ಬೆಳಿಗ್ಗೆಯಿಂದ ಚೂರು ವ್ಯಾಪಾರ ಆಗಿಲ್ಲ. 2 ದಿನದಿಂದ ಮನೇಲಿ ಯಾರ ಹೊಟ್ಟೇನೂ ತುಂಬಿಲ್ಲಕ್ಕ. ತಂಗಿಗೆ ಬೇರೆ ಮೈಗೆ ಹುಶಾರಿಲ್ಲ" ಅಂದ ಹನ್ನೆರಡರ ಆ ಪೋರ. ಅವನ ಮಾತು ಕೇಳಿದವಳು ಅವನೆಡೆಗೆ ತಿರುಗಿ, ಅವನ ಆ ಮುಗ್ಧ ಮುಖವನ್ನು, ಆ ಅಮಾಯಕ ಕಂಗಳನ್ನು, ಅದರಲ್ಲಿನ ಹಸಿವನ್ನು, ಆಸೆ-ಕನಸುಗಳನ್ನು ನಿಲುಕಲು ಯತ್ನಿಸಿದಳು. ಅವನ ಕಣ್ಣುಗಳಲ್ಲಿ ತನ್ನ ಬಾಲ್ಯದ ಪ್ರತಿಬಿಂಬ ಕಂಡಂತಾಗಿ ಮನಸ್ಸಿಗೆ ತುಂಬಾ ನೋವಾಯಿತು. ಆ ಚಿಕ್ಕ ವಯಸ್ಸಿಗೇ ಮನೆಯ ಭಾರವೆಲ್ಲ ಹೊತ್ತ ಪುಟ್ಟ ಹುಡುಗನ ಮೇಲೆ ಮೆಚ್ಚುಗೆ, ಮಮತೆ ಮೂಡಿತು. ಕಿಟಕಿಯಿಂದ ಕೈ ಚಾಚಿ, ಆತನ ತಲೆ ಸವರಿ, ಕೆನ್ನೆ ನೇವರಿಸುವ ಮನಸ್ಸಾದರೂ ಹಾಗೆ ಮಾಡುವುದು ಸರಿಯಾಗದೇನೋ ಅನ್ನಿಸಿ ಸುಮ್ಮನಾದಳು.
"30 ಕ್ಕೆ ಕೊಡೊದಾದ್ರೆ 2 ಕಿಲೊ ಕೊಡು" ಪಕ್ಕಾ ಚೌಕಾಸಿ ಮಾಡಿ ಕೇಳಿದಳು. ಆತ ಚಿಕ್ಕ ಮುಖ ಮಾಡಿಕೊಂಡರೂ ಕೊನೆಗೆ ಅಷ್ಟಾದರೂ ಸಿಕ್ಕಿತಲ್ಲ ಎಂಬಂತೆ, 2 ಕಿಲೊ ಕಿತ್ತಳೆ ಕೊಟ್ಟು ಅವಳು ಕೊಟ್ಟ 60 ರೂಪಾಯನ್ನು ಜೇಬಿಗಿಳಿಸಿ, ಕಿಸೆಯನ್ನೊಮ್ಮೆ ಮುಟ್ಟಿ ನೋಡಿಕೊಂಡ. ಮತ್ತೆ ಅವಳ ಕಡೆಗೊಮ್ಮೆ ನೋಡಿದ.
ಅಷ್ಟರಲ್ಲಿ ಡ್ರೈವರ್ ಬಸ್ಸಿನ ಬಳಿ ಬಂದ. ಹುಡುಗ ಅಲ್ಲೇ ನಿಂತಿದ್ದ. ಬಸ್ಸು ಇನ್ನೇನು ಹೊರಡಬೇಕು ಅನ್ನೋವಾಗ ಏನೋ ನೆನಪಾದವರಂತೆ, ಟಿಕೆಟ್ ಗೆ ಅಂತ ಹಿಡಿದುಕೊಂಡಿದ್ದ ಹಣದಲ್ಲಿ 20 ರೂಪಾಯಿಯ ನೋಟು ತೆಗೆದು ಕಿಟಕಿಯಿಂದ ಕೈ ಹೊರಹಾಕಿ ಆ ಹುಡುಗನಿಗೆ ಕೊಟ್ಟಳು. ಆ ಹುಡುಗ ಗಾಬರಿ, ಅಚ್ಚರಿ, ಗೊಂದಲ ದಿಂದ ಕೈಯಲ್ಲಿ ಹಿಡಿದ ನೋಟನ್ನೂ, ಬಸ್ಸಿನಲ್ಲಿ ಕುಳಿತು ದೂರಾಗುತ್ತಿರುವ ಆಕೆಯ ಮುಖವನ್ನೂ ನೋಡುತ್ತಾ ನಿಂತ. ಅವಳು ಕಿಟಕಿಯಿಂದ ಮುಖ ಹೊರ ಹಾಕಿ ’ಇಟ್ಟುಕೋ’ ಅಂತ ಸನ್ನೆ ಮಾಡಿದಳು. ಅವನು ಏನೊಂದೂ ಅರ್ಥವಾಗದೆ, ಬಸ್ಸು ದೂರಾಗುವವರೆಗೂ ಅವಳು ಕುಳಿತ ಬದಿಗಿನ ಕಿಟಕಿಯನ್ನೆ ನೋಡುತ್ತಿದ್ದ. ಅಂಗಡಿಯಲ್ಲಿ 50 ಪೈಸೆಗೆ ಚೌಕಾಸಿ ಮಾಡುವ, ಮತ್ತೆ ನಾನು ಕೇಳದೆ ಹೋದರೂ ನನ್ನ ಕಣ್ಣುಗಳನ್ನು ನೋಡಿಯೇ, ಚಾಕ್ಲೇಟ್ ತೆಗೆಸಿಕೊಡುವ ನನ್ನಮ್ಮ ನೆನಪಾದಳು.
ಬದುಕಿನ ಪುಸ್ತಕದ ಹರಿದ
ಪುಟಗಳ ನಡುವೆ
ನೀರೆರಚಿ ಹಿಂಜಿದ
ಅಕ್ಷರಗಳ ನಡುವೆ
ಹುಡುಕುತ್ತಿರುವೆ ನಿನ್ನ
ನೆನಪುಗಳ ದೀಪ ಹಿಡಿದು
ಕಣ್ಣು ಹಾಳೆಯೊಳಗೇ
ಹೋದರೂ ಕಾಣಿಸದಷ್ಟು
ಮಸುಕಾಗಿದೆ ಅಕ್ಷರಗಳು
ಆದರೂ ನೀ ಬಂದ
ಹೆಜ್ಜೆ ಗುರುತು ಅಲ್ಲೆಲ್ಲಾದರೂ
ಇನಿತು ಅಚ್ಚೊತ್ತಿರಬಹುದೇ
ಎಂಬ ಭ್ರಮೆಯಲಿರುವೆ
ನೀ ಮತ್ತೆ ನನ್ನ ಬದುಕಿನ
ಖಾಲಿ ಹಾಳೆಗಳ ಮೇಲೆ
ಮುದ್ದು ಅಕ್ಷರವಾಗುವುದು ಬೇಡ
ಬದುಕಿಗೆ ರಂಗೇರಿಸುವುದೂ ಬೇಡ
ಆ ಪುಟಗಳಲ್ಲಿ ಅಕ್ಷರವಾಗಿ
ಒದ್ದಾಡುವ ನಿನ್ನ ಮುದ್ದು ಮುಖ
ನನ್ನ ಕಣ್ಣ ಒದ್ದೆ ಮಾಡುವುದೂ ಬೇಡ
ನೀ ಜತೆಗಿದ್ದ ಕ್ಷಣಗಳ ನೆನೆದು
ಖುಶಿಯಾಗುತ್ತ ಅವುಗಳಿಂದಲೇ
ಬದುಕಿಗೆ ಸ್ಪೂರ್ತಿ ಪಡೆಯುತ್ತ
ಎಲ್ಲ ನೋವುಗಳ ನಡುವೆಯೂ
ನಿನ್ನ ನಗು ಮೊಗವನ್ನು
ಕಂಗಳಲ್ಲಿ ತುಂಬಿಕೊಂಡು
ನಿನಗಾಗಿ ಬದುಕುತ್ತಿರುವೆ.
"ನಾನು ಯಾಕಾದ್ರೂ ಅವಳ ಬಗ್ಗೆ ಪೇಪರ್ ನಲ್ಲಿ ಬರೆದನೇನೋ ಅನಿಸ್ತಿದೆ. ಅದ್ಯಾರೋ ಹೇಳಿದ್ರು ಅಂತ ಕಲ್ಪನೆಯ ಕತೆ ಎಲ್ಲ ಬಿಟ್ಟು ಸತ್ಯ ಘಟನೆಗಳನ್ನ ಬರೆಯೋಕೆ ಹೊರಟುಬಿಟ್ಟೆ. ಇಲ್ಲದಿದ್ರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಅವಳು ಅದನ್ನು ನೋಡ್ಬಿಟ್ರೆ ಏನು ಮಾಡೋದು?" ಪ್ರಿಯಾಳ ಹತ್ರ ಕೇಳಿದೆ. ಪ್ರಿಯಾ ಸಮಾಧಾನಿಸಿದಳು."ಏನೂ ಆಗೊಲ್ಲ. ಹೆದ್ರಬೇಡ. ಅವಳು ಇದನ್ನೆಲ್ಲ ಎಲ್ಲಿ ಓದ್ತಾಳೆ? ಅಷ್ಟಕ್ಕೂ ನೀನು ಅವಳ ಹೆಸರು ಹಾಕಿಲ್ವಲ್ಲ. ಏನೂ ತೊಂದ್ರೆಯಿಲ್ಲ ಬಿಡು."
"ಆದರೂ ನಾನು ಮಾಡಿದ್ದು ತಪ್ಪಾಯ್ತೇನೋ ಅನಿಸ್ತಿದೆ ಕಣೇ.. ಅವಳ ಖಾಸಗಿ ಬದುಕನ್ನು ಹೀಗೆ ಹರಾಜು ಹಾಕೋದಿಕ್ಕೆ ನಂಗೆ ಏನು ಅಧಿಕಾರ ಇದೆ ಹೇಳು.ಅವಳು ಅದನ್ನ ಓದಿದ್ರೆ ಏನಾಗುತ್ತೋ ಅನ್ನೋ ಭಯದಿಂದ ನಿದ್ರೆನೇ ಬರ್ತಿಲ್ಲ..."ನಾನು ಹೇಳಿದಾಗ ಪ್ರಿಯಾಗೂ ಸ್ವಲ್ಪ ಭಯವಾಗಿರಬೇಕು. ಸುಮ್ಮನೆ ತಲೆ ಮೇಲೆ ಕೈಯಿಟ್ಟು ಕುಳಿತು ಬಿಟ್ಟಳು.
ನಾನು ಹೀಗೆಲ್ಲ ತರಲೆ ಮಾಡಿಕೊಂಡಿದ್ದು ಅಣ್ಣಂಗೆ ಗೊತ್ತಾದ್ರೆ ಅಂತ ಭಯವಾಯ್ತು. ಬೇರೆ ಯಾವ ದಾರಿನೂ ಕಾಣಿಸ್ಲಿಲ್ಲ.
ಮನಸ್ಸು ನಾನು ಮಾಡಿದ್ದೇ ಸರಿ ಅಂತ ನನ್ನ ಸಮರ್ಥಿಸ್ತಿತ್ತು. ಕೊನೆಗೆ ಸ್ವಲ್ಪ ಹುಂಬ ಧೈರ್ಯ ಮಾಡಿ ಹೇಳಿದೆ. "ಪ್ರಿಯಾ, ನಾಳೆ ಅವಳನ್ನು ಮನೆಗೆ ಕರೆದು ಬಾ. ಎಲ್ಲಾ ಹೇಳಿಬಿಡ್ತೇನೆ. ಹಾಗೇನಾದ್ರು ಅವಳು ಸಿಟ್ಟು ಮಾಡ್ಕೊಂಡು ಸಂಬಂಧ ಮುರಿದುಕೊಂಡ್ರೆ, ’ಒಳ್ಳೇದೇ ಆಯ್ತು. ಯಾವತ್ತೂ ನಮ್ಮದು ಆಗಿರದೇ ಇದ್ದ ಸಂಬಂಧ ಒಂದು ಕಡಿದು ಹೋಯ್ತು’ ಅಂತ ಖುಶಿಯಾಗಿ ಇದ್ದುಬಿಡೋಣ" ಅಂದೆ. ಪ್ರಿಯಾಗೆ ನನ್ನ ಯೋಚನೆ ಸರಿ ಕಾಣಿಸಲಿಲ್ಲ. "ನಾವಾಗಿ ಕರೆದು ಹೇಳಿದ್ರೆ, ಅವಳು ಏನು ತಿಳ್ಕೋಬಹುದು? ಬೇಡ. ಅವಳೇ ನೋಡಿದರೆ ನೋಡಲಿ. ಇಲ್ಲಾಂದ್ರೆ ಬೇಡ ಬಿಡು. ನಾವೂ ಸುಮ್ಮನಿದ್ದು ಬಿಡೋಣ." ಅಂದಳು ಪ್ರಿಯಾ. "ಸರಿ ಹಾಗಾದ್ರೆ. ನೇರವಾಗಿ ಹೇಳೋದು ಬೇಡ. ಅವಳನ್ನು ಊಟಕ್ಕೆ ಕರೆದು ತಾ. ನಾನು manage ಮಾಡ್ತೀನಿ." ಅಂದೆ ಮತ್ತದೇ ಹುಂಬ ಧೈರ್ಯದಲ್ಲಿ.
ಪ್ರಿಯಾ ಹೋಗಿ ಹೇಳಿ ಬಂದಳು. ಮಾರನೆ ದಿನ ಅವಳು ನಗ್ತಾ ನಮ್ಮನೆಗೆ ಬಂದಳು. ಪ್ರಿಯಾ ಅಡುಗೆ ಕೋಣೆ ಬಿಟ್ಟು ಹೊರಗೆ ಬರಲೇ ಇಲ್ಲ. ಪ್ರಿಯಾನೂ ಜೊತೆಗೇ ಇದ್ದಿದ್ದರೆ ಚೆನ್ನಾಗಿತ್ತು ಅನಿಸಿತು. ಧೈರ್ಯ ತಂದುಕೊಂಡು ತುಂಬಾ ಹೊತ್ತು ಅದೂ ಇದೂ ಮಾತನಾಡಿದ ಮೇಲೆ " ಈಗ ಬಂದೆ ಇರು" ಅನ್ನುತ್ತಾ ಅಡುಗೆ ಕೋಣೆಗೆ ಎದ್ದು ಹೋದೆ. ಎಲ್ಲಾ ನಾನಂದುಕೊಂಡ ಹಾಗೇ ನಡೆಯುತ್ತಿತ್ತು. ನಾನು ಬಾಗಿಲ ಮರೆಯಲ್ಲಿ ನಿಂತು ನೋಡ್ತಾ ಇದ್ದೆ. ನಾನು ಎದ್ದು ಬಂದ ಮೇಲೆ ಅವಳು ಓದೋಕೆ ಅಂತ ಟೇಬಲ್ ಮೇಲೆ ನಾನಿಟ್ಟಿದ್ದ ಆ ಪೇಪರ್ ತೆಗೆದುಕೊಂಡು ಓದತೊಡಗಿದಳು. ನಾನು ಉಸಿರು ಬಿಗಿ ಹಿಡಿದು ಅವಳನ್ನೇ ನೋಡ್ತಾ ಮುಂದೆ ನಡೆಯಬಹುದಾದ ದುರಂತ ಮತ್ತೆ ಗಲಾಟೆಗಳಿಗೆ ಮನಸಿಕವಾಗಿ ಸಿದ್ಧಳಾಗ್ತಿದ್ದೆ.
ಅವಳು ಓದ್ತಾ ಇದ್ದಳು............. ಓದಿ ಮುಗಿಸಿರಬೇಕು... ಆ ಲೇಖನದ ತುದಿಯನ್ನು ದಿಟ್ಟಿಸಿ ನೋಡ್ತಿದ್ದಾಳೆ. "ಹೌದು.. ಅವಳಿಗೆ ಈಗ ನನ್ನ ಮೇಲೆ ಕೋಪ ಬರುತ್ತೆ. ಕೂಗಾಡ್ತಾಳೆ. ಆದ್ರೆ ನಾನು ಏನೂ ಮಾತನಾಡದೆ ಸುಮ್ಮನೆ ಕೇಳ್ತಿರಬೇಕು. ಅವಳು ಕೂಗಾಡಿ, ಕಿರುಚಾಡಿ ಸುಮ್ಮನಾಗ್ತಾಳೆ. .." ನಾನು ಕಲ್ಪನೆಯಲ್ಲಿ ಮುಳುಗಿದ್ದೆ. ಪ್ರಿಯ ನನ್ನ ಬೆನ್ನು ತಟ್ಟಿದಾಗ ವಾಸ್ತವಕ್ಕೆ ಬಂದೆ. ಪ್ರಿಯ ಏನೂ ಮಾತನಾಡದೆ ತೋರುಬೆರಳಿಂದ ಅವಳನ್ನು ತೋರಿಸಿದಳು. ಅವಳು ಚೂರೂ ಸಿಟ್ಟು ಮಾಡ್ಕೊಂಡಿರಲಿಲ್ಲ.... ಬದಲಿಗೆ ಅಳ್ತಿದ್ದಳು. ನಂಗೆ ಗೊಂದಲ.... ಏನೂ ಅರ್ಥವಾಗ್ಲಿಲ್ಲ. ಪ್ರಿಯ ಸಹ ನನ್ನ ಹಾಗೆ ಗಲಿಬಿಲಿಯಾಗಿದ್ದಳು. ನನ್ನ ಮುಖವನ್ನೇ ನೋಡ್ತಿದ್ದಳು. ಇಬ್ಬರೂ ನಿಧಾನ ಹೊರಗೆ ಹೋದೆವು.
ಅವಳು ಇನ್ನೂ ಅಳುತ್ತಲೇ ಇದ್ದಳು. ನಾನು ಅವಳ ಪಕ್ಕ ಕುಳಿತು "ಏನಾಯ್ತು?" ಕೇಳಿದೆ, ಏನೂ ಗೊತ್ತಿಲ್ಲದೋರ ಥರ. ಮೌನವಾಗಿ ಪೇಪರ್ ತೆಗೆದು ನನ್ನ ಕೈಲಿಟ್ಟಳು. "ಏನೋ ನೆನಪಾಯ್ತು ಅಷ್ಟೇ...." ಅನ್ನುತ್ತಾ ಕಣ್ಣೊರೆಸಿಕೊಂಡಳು. ನಾನು ಹೆಚ್ಚು ಕೆದಕಿ ಕೇಳಲಿಲ್ಲ. ’ ಅವಳು ಬರೆದಿರುವ ನನ್ನ ಹೆಸರು ನೋಡಿಲ್ವಾ? ಅಥ್ವಾ ನೋಡಿಯೂ ಹೀಗೆ ನಾಟಕ ಮಾಡ್ತಿದಾಳಾ?’ ಅಂದುಕೊಂಡೆ. ಯಾವಾಗ್ಲೂ ಸಮರ್ಥಿಸ್ತಿದ್ದ ನನ್ನ ಮನಸ್ಸೂ ನನ್ನ ಪರ ವಹಿಸಲಿಲ್ಲ. ’ಚಿಕ್ಕಂದಿನಲ್ಲಿ ನಮ್ಮ ನಡುವೆ ನವಿಲುಗರಿಗಾಗಿ ನಡೆದ ಒಂದು ಚಿಕ್ಕ ಜಗಳಕ್ಕೆ ನಾನು ಹೀಗೆ ಸೇಡು ತೀರಿಸಿಕೊಂಡೆನಾ?’ ಅವಳನ್ನು ನೋದಲು ಧೈರ್ಯ ಸಾಲದೆ ತಲೆ ಕೆಳಗೆ ಮಾಡಿದೆ. ಪರಿಸ್ಥಿತಿ manage ಮಾಡುವ ಧೈರ್ಯ ಕರಗಿ ಹೋದಂತನಿಸಿತು. ಅಷ್ಟರಲ್ಲಿ ಪ್ರಿಯಾ "ಬನ್ನಿ ಊಟ ಮಾಡೋಣ. ಪಾಯಸ ತಣಿದು ಹೋಗ್ತಿದೆ" ಅಂದಳು. ನಾನೂ ಸ್ವಲ್ಪ ಸುಧಾರಿಸಿಕೊಂಡೆ. "ಬಾ.. ಆಮೇಲೆ ಮಾತಾಡೋಣ" ಎಂದೆ. ಅವಳು ಕೈ ತೊಳೆಯಲು ಎದ್ದು ಹೋದಳು. ಪ್ರಿಯಾ ಅಡುಗೆ ಕೋಣೆಗೆ ಹೋದಳು. ನಾನು ಯಾರಿಗೂ ಕಾಣಿಸದ ಹಾಗೆ ಆ ಪೇಪರ್ ನ್ನು ಬೇರೆ ಕಡೆ ಇಟ್ಟು ಬಿಟ್ಟೆ. ಪೇಪರ್ ಮೇಲೆ ಅವಳ ಕಣ್ಣೀರಿನ ಒಂದು ಹನಿ ನಗುತ್ತಿತ್ತು.
ಹರಿದ ರಕ್ತದ ಕೋಡಿ ಎಂದಾದರೂ
ನಿಮ್ಮ ಎದೆಯ ಮುಟ್ಟೀತು
ಅಂದು ನಿಮ್ಮ ಆತ್ಮ
ನಿಮ್ಮನ್ನೇ ಧಿಕ್ಕರಿಸೀತು
ನಿಮ್ಮ ಅಮಾನುಷ ಕ್ರತ್ಯಕ್ಕೆ
ನಮ್ಮ ಬಂದೂಕಿನ ಬಾಯೊಳಗೆ
ನಗುವ ಗುಲಾಬಿಗಳೇ ಉತ್ತರಿಸಲಿ
ನಿಮ್ಮ ಗುಂಡುಗಳು
ದೇಹವನ್ನಷ್ಟೇ ಸುಡಬಹುದು
ನಮ್ಮೊಳಗಿನ ಪ್ರೀತಿಯನ್ನಲ್ಲ
ನಮ್ಮ ಪ್ರೀತಿಗೆ ನಿಮ್ಮೊಳಗಿನ
ದ್ವೇಷವನ್ನೂ ಸುಡುವ ಶಕ್ತಿಯಿದೆ
ನಿಮ್ಮ ಬಾಂಬುಗಳು ನಮ್ಮ
ನೆಲವನ್ನಷ್ಟೇ ನಡುಗಿಸಬಹುದು
ನಮ್ಮ ಒಗ್ಗಟ್ಟು, ವಿಶ್ವಾಸವನ್ನಲ್ಲ
ಮಾನವೀಯತೆಯ ಚೀತ್ಕಾರಕ್ಕೆ
ನಿಮ್ಮ ದುಷ್ಟತೆಯ ಫೂತ್ಕಾರ
ಅಡಗಿಸುವ ಕೆಚ್ಚಿದೆ
ನಮ್ಮ ಕಣ್ಣೊಳಗಿನ ಸ್ಥೈರ್ಯಕ್ಕೆ
ನಿಮ್ಮ ಕಣ್ಣ ಕತ್ತಲೆಯ
ಕಳೆಯುವ ತಾಕತ್ತಿದೆ
ನಾವು ಎಂದಿಗೂ ಸೋಲುವುದಿಲ್ಲ
ದ್ವೇಷಕ್ಕೆ, ಹಿಂಸೆಗೆ ತಲೆಬಾಗುವುದಿಲ್ಲ
ಅಮ್ಮ ಕೊಟ್ಟ ಬೆಳ್ಳಿ ಬಟ್ಟಲಿಗೀಗ
ತುಂಬು ಐದರ ಹರೆಯ
ಕಾಲ ಮೇಲೆ ಕೂಸೇ ಇಲ್ಲ
ಕೂಸು ಹುಟ್ಟೋ ಮುಂಚೆಯೇ
ಹೊಲಿದಿಟ್ಟಿದ್ದ ಕುಲಾವಿ ಮೂಲೆ ಸೇರಿದೆ
ಕಂದನಿಗೆಂದು ತಂದಿದ್ದ ಮೂರು ಗಾಲಿಯ
ಸೈಕಲ್ ಕತ್ತಲ ಅಟ್ಟ ಏರಿದೆ
ಪುಟ್ಟ ಪಾದಗಳ ಸ್ಪರ್ಶವಿಲ್ಲದೆ
ನೆಲವೂ ಬಾಯ್ಬಿರಿದಿದೆ
ಕಂದ ಹಿಡಿದೆಳೆಯದೇ ತಾಯಿಯ
ತಾಳಿಯೂ ಸೂತಕದಲ್ಲಿದೆ
ಮನೆಯಲ್ಲಿ ಬೀಸಣಿಕೆ ಗಾಳಿಯೇ ಇಲ್ಲ
ಒಳಗೆಲ್ಲ ಧಗೆ, ಹೊರಗೂ ಹೊಗೆ
ಗೊಂಬೆಗಳೆಲ್ಲಾ ಭಣಗುಟ್ಟುತ್ತಿವೆ
ಕಂದ ತೊದಲದ ಮನೆಯಲ್ಲಿ ಮಹಾಮೌನ.
ನೆಲ ನಡುಗಿದೆ
ಬಾನ್ ಗುಡುಗಿದೆ
ಇದು ಯಾತರ ಪ್ರೀತಿ?
ಮನ ಮೆಚ್ಚಿದ
ಇಳೆಯೆದೆಯಲಿ
ಏತಕೋ ಈ ಭೀತಿ?
ಕರಿ ಮೇಘವು
ಕುಡಿ ನೋಟದಿ
ಮೈ ಮರೆಸುವ ರೀತಿ
ಭುವಿ ಉಟ್ಟಿಹ
ಜರಿ ಸೀರೆಗೆ
ಹಚ್ಚಸಿರ ಕಸೂತಿ
ಮೈ ಬೆಚ್ಚಿದೆ
ಕಣ್ ಮಿಂಚಿದೆ
ಇದು ಯಾತರ ಪ್ರೀತಿ?
ಅವಳು ಕುಳಿತಿದ್ದ ಬಸ್ಸಿನ ವೇಗಕ್ಕೂ, ಅವಳ ಮನಸ್ಸಿನ ವೇಗಕ್ಕೂ ತಾಳೆ ಹೊಂದುತ್ತಿರಲಿಲ್ಲ. ಗೊಂದಲಗಳ ಗೂಡಾಗಿದ್ದ ಮನಸ್ಸು ಅವಳಲ್ಲಿ ವಿಚಿತ್ರ ತಳಮಳ ಉಂಟುಮಾಡಿತ್ತು. ಊರು ಹತ್ತಿರ ಬರುತ್ತಿದ್ದಂತೆ ಎದೆಯಲ್ಲಿ ಸಂಕಟ, ವೇದನೆ. ಎಂದಿನಂತೆ ಕಣ್ಣು ಮುಚ್ಚಿ ಕುಳಿತರೂ ಮನಸ್ಸು ಸ್ತಿಮಿತಕ್ಕೆ ಬರುವಂತೆ ಕಾಣಲಿಲ್ಲ. ಹಿತವಾಗಿ ಬೀಸುತ್ತಿದ್ದ ತಂಗಾಳಿಯೂ ಮುದ ನೀಡಲಿಲ್ಲ. ಕತ್ತಲು ಆಗಷ್ಟೇ ಚಿನ್ನಾಟಕ್ಕೆ ಶುರು ಮಾಡಿತ್ತು. ಕಿಟಕಿಯಿಂದ ಹೊರ ನೋಡುತ್ತಾ ಕುಳಿತಳು. ತಂದೆಯೊಬ್ಬ ಮಗುವಿಗೆ ಐಸ್ ಕ್ರೀಮ್ ಕೊಡಿಸುತ್ತಿದ್ದುದು ಕಾಣಿಸಿತು. ಎಷ್ಟು ನೆನಪಿಸಿಕೊಂಡರೂ ನೆನಪಾಗದ ಅಪ್ಪನ ಮುಖವನ್ನು ಮತ್ತೆ ಕಲ್ಪಿಸಿಕೊಳ್ಳಲು ಯತ್ನಿಸಿದಳು. ಸಾಧ್ಯವಾಗಲಿಲ್ಲ. ಕಣ್ಣಲ್ಲಿ ನೀರು ತುಂಬಿತ್ತು. ಜೋರಾಗಿ ಅತ್ತು ನೋವನ್ನೆಲ್ಲ ಹೊರಹಾಕಿ ಬಿಡಲೇ ಅಂದುಕೊಂಡು ಅಕ್ಕ ಪಕ್ಕ ನೋಡಿದಳು. ಅವರುಗಳೆಲ್ಲ ಅವಳನ್ನೇ ಅನುಕಂಪದಿಂದ ನೋಡುತ್ತಿದ್ದಂತೆನಿಸಿತು. ಕಣ್ಣು ತಪ್ಪಿಸಿ ಹೊರನೋಡತೊಡಗಿದಳು ಮತ್ತೆ.
ಅಮ್ಮನ ಪ್ರೀತಿ, ಮಮತೆಯನ್ನೇ ಮಡಿಲಲ್ಲಿ ತುಂಬಿಕೊಂಡಂತೆ ಆಗಸದೆತ್ತರಕ್ಕೆ ಚಾಚಿ ನಿಂತ ಬೆಟ್ಟಗಳು ಅವಳನ್ನೆ ಕೈ ಬೀಸಿ ಕರೆದಂತಿತ್ತು. ಎದುರುಗಡೆ ಸೀಟ್ ನಲ್ಲಿ ಕುಳಿತ ಯುವಕನೊಬ್ಬ ಕೈಲಿ ಪುಸ್ತಕ ಹಿಡಿದು ಓದುವುದರಲ್ಲಿ ತಲ್ಲೀನನಾಗಿದ್ದ. "ಬರೀ ಪುಸ್ತಕ ಓದೋದರಿಂದ ಯೇನೂ ಸಾಧಿಸಿದಂತಾಗೊಲ್ಲ. ಬದುಕು ಥಟ್ಟಂತ ನಮ್ಮೆದುರು ತಿರುವುಗಳನ್ನು ತಂದಿಟ್ಟಾಗ ಧೈರ್ಯದಿಂದ ಒಂದು ದಾರಿ ಆರಿಸಿ ಮುನ್ನಡೆಯೋದು ಇದ್ಯಲ್ಲ. ಅದೇ ದೊಡ್ಡ ಸಾಧನೆ" ಎಂದು ಕೂಗಿ ಹೇಳಬೇಕೆನ್ನಿಸಿತು. ಹಾಗೆ ತನ್ನ ಬಾಲ್ಯ, ಶಾಲೆ ಎಲ್ಲಾ ನೆನಪಾಯಿತು. ಕೆಂಪು ಬಾಜಾರದ ಹೆಸರು ಕೇಳಿದರೆ ಅಸಹ್ಯ ಪಡುತ್ತಿದ್ದ ತನ್ನನ್ನು ಅದೇ ಕೊಳಚೆ ಹೊಂಡಕ್ಕೆ ತಂದು ಹಾಕಿದ ಬದುಕಿನ ದಾರುಣ ಅನಿವಾರ್ಯತೆ ಎಂಥದ್ದು? ಯೋಚಿಸುತ್ತಿದ್ದವಳಿಗೆ ೪ ನೇ ಕ್ಲಾಸಿನಲ್ಲಿ ಸಹಪಾಠಿಯಾಗಿದ್ದ ಕುಂಟ ಸೀನನ ನೆನಪಾಯಿತು. ಆ ಚಿಕ್ಕ ವಯಸ್ಸಿನಲ್ಲೇ ಎಲ್ಲರನ್ನೂ ಕಳೆದುಕೊಂಡು, ವಿದ್ಯಾಭ್ಯಾಸಕ್ಕೆ ಎಳ್ಳು ನೀರು ಬಿಟ್ಟಿದ್ದ ಸೀನ ಬೊಂಬಾಯಿಯ ರೈಲು ಹತ್ತಿದ್ದನೆಂದು ಯಾರೋ ಹೇಳಿದ್ದರು. ನಂತರ ಅವನೆಲ್ಲೋ ಡ್ರೈವರ್ ಆಗಿದಾನಂತೆ, under world ಸೇರಿದಾನಂತೆ.. ಹೀಗೆ ಥರ ಥರದ ಮಾತುಗಳು. ಆ ಚಿಕ್ಕ ವಯಸ್ಸಿನಲ್ಲೇ ಅಷ್ಟೆಲ್ಲ ನೋವುಂಡರೂ ಬದುಕುವ ದಾರಿ ಆಯ್ದುಕೊಂಡ ಅವನ ಅನಿವಾರ್ಯತೆ ಎಂಥದ್ದು? ಯೋಚಿಸುತ್ತಿದ್ದಂತೆ ತಾವಿಬ್ಬರೂ ಒಂದೇ ದಾರಿಯ ಪಯಣಿಗರೆನ್ನಿಸತೊಡಗಿತು. ಎಲ್ಲಿದ್ದರೂ ಅವನು ಸುಖವಾಗಿರಲಿ ಎಂದು ಹಾರೈಸಿದಳು.
ತನ್ನದೇ ಒಂದು ಪುಟ್ಟ ಜಗತ್ತಿನಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದ ಅವಳನ್ನು ಈ ದುರ್ಗಮ ಪ್ರಪಂಚಕ್ಕೆ ತಳ್ಳಿದ ಆ ಕ್ರೂರ ವಿಧಿಯನ್ನು ಶಪಿಸಿದಳು. ಅಷ್ಟರಲ್ಲಿ ಇಳಿಯಬೇಕಾದ ಜಾಗ ಬಂತು. ಬಸ್ ಸ್ಟಾಂಡ್ ನಲ್ಲಿ ಅವಳಿಗಾಗಿ ಕಾದು ನಿಂತಿದ್ದರು ಅಮ್ಮ, ತಮ್ಮ. ’ಅವರಿಬ್ಬರ ಬಳಿಯೂ ತುಂಬಾ ಮಾತನಾಡಬೇಕು. ತಾನು ಚೆನ್ನಾಗಿದ್ದೇನೆ, ಒಳ್ಳೆಯ ಕೆಲಸದಲ್ಲಿದ್ದೇನೆ ಅಂತ ಹೇಳಬೇಕು. ಅಮ್ಮನನ್ನ ಡಾಕ್ಟರ್ ಬಳಿ ಕರೆದೊಯ್ಯಬೇಕು. ಅಮ್ಮನ ಕೈಯಲ್ಲಿ ದುಡ್ಡು ಕೊಟ್ಟಾಗ ಅವಳ ಕಣ್ಣಲ್ಲಿನ ಆ ಸಂಭ್ರಮ ನೋಡಬೇಕು.’ ಎಂದುಕೊಳ್ಳುತ್ತಾ ಇಳಿದಳು. ಆಗಸದಲ್ಲಿ ಚಂದಿರ ಕಿರುನಗೆ ಚೆಲ್ಲುತ್ತಾ ಮೆಲ್ಲನೆ ಹೊರಬರುತ್ತಿದ್ದ. ಅಲ್ಲೊಂದು ಹಾಲು ಬೆಳದಿಂಗಳ ತಣ್ಣನೆ ರಾತ್ರಿ ಅವಳಿಗಾಗಿ ಕಾದಿತ್ತು.
ಝೋಪಡಿಯೊಳಗಿನ ಆ ಸೀರೆಗೆ
ಹಲವು ಬಣ್ಣಗಳು
ಉಟ್ಟು ಬಿಟ್ಟ ಯಾರೋ ಕೊಟ್ಟ ಸೀರೆಗೆ
ವಾರಸುದಾರಳು ಅವಳು
ಯಾರ್ ಯಾರದೋ ಮನೆಯ
ಕಸ ಮುಸುರೆ ಮಾಡಿ
ತನ್ನ ಹೊಟ್ಟೆ ಕಟ್ಟಿ ಮನೆ ಸಾಕುವ
ಆಕೆ ಮಹಾ ತಾಯಿ
ಪಕ್ಕದ ಮನೆ ದೀಪಾವಳಿ ಬೆಳಕಲ್ಲಿ
ಹೊಳೆಯುವ ಹೊಂಬಣ್ಣದ ಸೀರೆ
ಹೋಳಿಯ ಬಣ್ಣ ಬಳಿದುಕೊಂಡ
ಕಂದನ ಮೈಯ ವರ್ಣಧಾರೆ
ಕುಡಿದ ಗಂಡನ ಬಡಿತಕ್ಕೆ ಬಿದ್ದಾಗ
ಅದಕ್ಕೆ ನೆಲದ ಮಣ್ಣು ಬಣ್ಣ
ನೋವು ಕಣ್ಣೀರಾಗಿ ಹರಿದಾಗ
ಎಲ್ಲ ತೊಯ್ದು ಶುಭ್ರ ಬಿಳಿ ಬಣ್ಣ
ತನ್ನಂತೆ ದುಡಿದು ಮರಗಟ್ಟಿ ಹೋದ
ತಾಯ ನೆನಪಿನ ಬಣ್ಣ ಅದು
ಕನಸೇ ಮರೆತು ಹೋದ ಕಣ್ಣಿನ ಬಣ್ಣ
ಅವಳ ಆ ಪುಟ್ಟ ಜಗತ್ತಿನ ಬಣ್ಣ ಅದು
ಸತ್ತ ಭರವಸೆಗಳ ಗೋರಿಯ ಮೇಲೆ
ಮತ್ತೆ ಕಲ್ಲುಗಳು ಬೀಳದಿರಲಿ
ಬಾಡದಿರಲಿ ಗುಲ್ ಮೊಹರ್ ಹೂಗಳು
ಹೊಸ ದಿನಗಳು ಚಿಗುರುತಿರಲಿ
ಕಣ್ಣಿನ ರಕ್ತ ಹೆಪ್ಪುಗಟ್ಟಿದೆ
ಹ್ರದಯ ಕಲ್ಲಾಗಿ ಹೋಗಿದೆ
ಹೊರಗೆ ಕೊರೆಯುವ ತಣ್ಣನೆ ಚಳಿ
ಗುಲ್ ಮೊಹರ್ ಗಳ ಚುಂಬಿಸಿ
ನೆಲ ತಾಕುತ್ತಿರುವ ಮಳೆ ಹನಿಯ ಚಿಟಿಪಿಟಿ
ಯಾತನೆಯಾದರೂ ಇದೇ ಹಿತವಾಗಿದೆ
ನೆನಪುಗಳು ಕಣ್ಣೆದುರಲ್ಲೇ ಸ್ಥಿತವಾಗಿದೆ
ಬೇಸಗೆಯ ಧಗೆ ತಾಗದಿರಲಿ
ನೆನಪುಗಳಾದರೂ ಹಸಿರಾಗಿರಲಿ
ಗಗನ್,
ನೀನೊಬ್ಬ ಮಹಾ ದುರದ್ರಷ್ಟವಂತ. ಬಳಿ ಬಂದಿದ್ದ ಅಪರಂಜಿಯನ್ನು ಅನ್ಯಾಯವಾಗಿ ಸತಾಯಿಸಿಬಿಟ್ಟೆಯಲ್ಲೋ.. ಇನ್ನೆಂದೂ ನಿನಗೆ ಅದು ಸಿಗಲಾರದು. ಆದರೂ ಅದು ಸದಾ ನಿನ್ನ ನೋಡುತ್ತಿರುತ್ತೆ ನಕ್ಷತ್ರವಾಗಿ, ಎದೆಯಲ್ಲಿ ನಿನಗಾಗಿ ಒಂದಿಷ್ಟು ಪ್ರೀತಿ ಬಚ್ಚಿಟ್ಟುಕೊಂಡು. ನಿನಗೆ ಪ್ರಣತಿಯಂತಹ ಚಿನ್ನವನ್ನು ಪಡೆಯುವ ಯೋಗ, ಯೋಗ್ಯತೆ ಎರಡೂ ಇರಲಿಲ್ಲ ಕಣೋ ಗಗನ್..
ತಾನಾಗಿ ಬಂದ ಪ್ರೀತಿ ಹೂವನ್ನು ಹಿಚುಕಿ ಹಾಕಿ ಬಿಟ್ಟೆಯಲ್ಲೋ.. ನೀನು ತುಂಬಾ ದೊಡ್ಡ ತಪ್ಪು ಮಾಡಿದೆ. ನಿನ್ನಲ್ಲಿ ಹ್ರದಯ , ಮನಸ್ಸು ಇದ್ದರೆ ಅವುಗಳನ್ನು ಕೇಳು ಗಗನ್, ನನ್ನ ಪ್ರಣತಿ ನಿನಗಾಗಿ ಎಷ್ಟು ಕನಸುಗಳನ್ನು ಹೆಣೆದಿದ್ದಳು ನಿದ್ರೆಗಳಿಗೆ ಚಕ್ಕರ್ ಕೊಟ್ಟು ಎಂದು...ನಿನ್ನ ಪಾಲಿಗೆ ಅವಳ ನೆನಪುಗಳೂ ಸಿಗಲಾರವು ಯಾಕೇಂದ್ರೆ ಅವೆಲ್ಲ ಬರೀ ನನ್ನವೇ...
ನಾವಿಬ್ಬರೂ ತೊದಲು ನುಡಿದದ್ದು,ತಪ್ಪು ತಪ್ಪಾಗಿ ಹೆಜ್ಜೆ ಇಟ್ಟು ಬಿದ್ದೆದ್ದು ನಡೆದದ್ದು ಎಲ್ಲಾ ಒಟ್ಟಿಗೇ.. ನಮ್ಮಿಬ್ಬರ ಮನಸುಗಳಿಗೆ ಯಾವುದೇ ಬೇಲಿ ಇರಲಿಲ್ಲ. ಅವಳು ತನ್ನ ಮನಸ್ಸನ್ನು ಪೂರ್ತಿಯಾಗಿ ನನ್ನೆದುರು ಬಿಚ್ಚಿಡುತ್ತಿದ್ದಳು. ಮೊದಲ ಬಾರಿ ನಿನ್ನ ಕಂಡಾಗ ಅವಳು ನನ್ನ ಹತ್ತಿರ ಏನು ಹೇಳಿದ್ದಳು ಗೊತ್ತಾ ಗಗನ್?.. " ಸುಮೀ, ನನ್ನ ಕನಸ ಕದ್ದ ರಾಜಕುಮಾರ ಸಿಕ್ಕಿ ಬಿಟ್ಟ ಕಣೇ.. ಅವನ ಕಂಡ್ರೆ ನನ್ನ ನಾನೆ ಮರೆತು ಬಿಡ್ತೀನಿ. ಎಷ್ಟು handsome ಆಗಿದಾನೆ ಗೊತ್ತ? ಮುಖದಲ್ಲಿ ಎಳೆದು ತಂದ ಹಾಗಿರೋ ಗಾಂಭೀರ್ಯ, ಚಿಗುರು ಮೀಸೆ, ಗುಂಗುರು ಕೂದಲು, ಕಣ್ಣ ಬೆಳಕಲ್ಲಿ ಸಾವಿರ ನಕ್ಷತ್ರಗಳು. ಆದ್ರೆ ಮಾತಾಡ್ಸೋದಿಕ್ಕೆ ಭಯ ಕಣೆ"... College ನಲ್ಲಿ
first day ಸೀನಿಯರ್ಸ್ ಗಳ ಜೊತೆಗೇ ಹೆದರದೆ ಮಾತಾಡಿದ್ದ ಹುಡ್ಗಿಗೆ ಎಂಥ ಭಯ? ಅಂದುಕೊಂಡು ಅವಳ ಮುಖ ನೋಡುವಾಗ ಕೆನ್ನೆ ಕೆಂಪಾಗಿತ್ತು. ’ಭಯ ಅಲ್ಲ ಅದು, ನಾಚಿಕೆ’ ನನ್ನ ಮನಸ್ಸು ಹೇಳಿತು. ದಿನಾ ಬೆಳಿಗ್ಗೆಯಿಂದ ರಾತ್ರಿವರೆಗೆ ಲೆಕ್ಕವಿಲ್ಲದಷ್ಟು ಬಾರಿ ನಿನ್ನ ಬಗ್ಗೆ ಹೇಳ್ತಿದ್ದಳು. ಮತ್ತೆ ನಾ ಮಲಗಿದ ಮೇಲೂ ನಿದ್ರೆ ಮಾಡದೆ ನಿನ್ನದೇ ಧ್ಯಾನ ಅವಳಿಗೆ, ಯಾಕಂದ್ರೆ
ಬೆಳಿಗ್ಗೆ ಕೆಂಪಾಗಿರುತ್ತ್ತಿದ್ದ ಅವಳ ಕಣ್ಣುಗಳು ಅವಳು ನಿದ್ರೆ ಮಾಡಿಲ್ಲ ಅಂತ ಸಾರಿ ಹೇಳುತ್ತಿತ್ತು. ನಾನೆಷ್ಟು ಬಾರಿ ಹೇಳಿದ್ದೆ ಅವಳಿಗೆ.., "ಪ್ರಣೀ, ಈ ಪ್ರೀತಿ, ಪ್ರೇಮ ಎಲ್ಲ ಭ್ರಮೆ ಕಣೇ..ಸುಮ್ಮನೆ ಅಪ್ಪ ಅಮ್ಮ ತೋರಿಸಿದ ಹುಡ್ಗನ್ನ ಮದ್ವೆಯಾಗಿ ಸುಖವಾಗಿರು. ನೀನೊಬ್ಬಳೇ ಮಗಳು ಅವ್ರಿಗೆ. ನೋವು ಕೊಡ್ಬೇಡ" ಅಂತ.
ಅವಳನ್ನು ಕಂಡು ನೀನು ಮೊದಲ ಸಲ ಮುಗುಳ್ನಕ್ಕ ದಿನ ಅವಳ ಪಾಲಿಗೆ ಸ್ವರ್ಗಾನೇ ಸಿಕ್ಕಷ್ಟು ಖುಶಿಯಾಗಿದ್ದಳು. "ನೋಡಿದ್ಯಾ? ನನ್ನ ರಾಜಕುಮಾರ ನಂಗೆ ಸಿಕ್ಕೆ ಸಿಗ್ತಾನೆ ಅಂತ ಹೇಳಿರಲಿಲ್ವಾ ನಾನು?" ಎಂದವಳ ಖುಶಿಯಲ್ಲೇ ನಾನೂ ಖುಶಿಯಾಗಿದ್ದೆ. ಆದ್ರೆ ಮಾರನೇ ದಿನ ನೀನು ಲೈಬ್ರೆರಿಯಲ್ಲಿ ಅವಳೆದುರೇ ಕೂತಿದ್ದರೂ ಅವಳನ್ನು ನೋಡಲಿಲ್ಲ ಅಂತ ಹೇಳಿದ ದಿನ ಮುಖ ಬಾಡಿತ್ತು.ಅಲ್ಲಿ ಖುಶಿ ಇರಲಿಲ್ಲ ನಿಜ, ಆದರೆ ಅದು ಅಳು, ನೋವು ಆಗಿರಲೂ ಇಲ್ಲ... ಅಪ್ಪನ ಬಳಿ ಪದೇ ಪದೇ ಹೇಳಿದ್ದರೂ ಗೊಂಬೆ ಮರೆತು ಬಂದ ಅಪ್ಪ ನಾಳೆ ತಂದೇ ತರ್ತೀನಿ ಅಂದಾಗಿನ ಭಾವ....
ಅವಳಲ್ಲಿ ಅಚಲ ವಿಶ್ವಾಸವಿತ್ತು ಗಗನ್.. ನಿನ್ನನ್ನು ಒಲಿಸಿಯೇ ಒಲಿಸಿಕೊಳ್ಳುವ ಅಪಾರ ನಂಬಿಕೆ ಇತ್ತು... ಇಲ್ಲಾಂದ್ರೆ ಅವಳು ಅಪ್ಪ ಅಮ್ಮ ತೋರಿಸಿದ ಹುಡ್ಗನ್ನ ನಿರಾಕರಿಸಲಾಗದೆ, ನಿನ್ನ ಮರೆಯಲಾಗದೆ ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು..
ಆದ್ರೆ ನನ್ನ ಪ್ರಣತಿ ಧೈರ್ಯವಂತೆ. ಅವಳು ನಿನ್ನ ಒಲಿಸಿಕೊಳ್ಳಲಾರದೆ ಹೋಗಿದ್ದರೆ, ಜೀವನ ಪೂರ್ತಿ ಹಾಗೆ ಇದ್ದು ಬಿಡುತ್ತಿದ್ದಳು ನಿನ್ನ ನೆನಪುಗಳ ಹನಿಯಲ್ಲಿ ಮೀಯುತ್ತಾ.......
ಅವತ್ತು ನನ್ನ ಕಾಲ ಮೆಲೆ ಮಲಗಿ ನನ್ನ ಕೈ ಹಿಡಿದು ಕೊನೆಯುಸಿರೆಳೆಯುತ್ತ ಏನು ಕೇಳಿದ್ಲು ಗೊತ್ತಾ? "ಸುಮೀ, ನನ್ನ ಗಗನ್ ನೋಡೋಕೆ ಬರಲೇ ಇಲ್ವೇನೆ?" ನನ್ನ ಬಾಯಿಂದ ಮಾತೇ ಹೊರಡ್ಲಿಲ್ಲ ಗಗನ್.. ಏನೂ ಹೇಳಲಾರದೇ ಕುಳಿತಿದ್ದೆ.. ಕೊನೆ ಕ್ಷಣಗಳನ್ನೆಣಿಸುತ್ತಾ ತಾಯಿ ಕಾಲ ಮೇಲೆ ಮಲಗಿದ ಮಗು "ಅಪ್ಪ ಗೊಂಬೆ ತಂದರಾ?" ಎಂದು ಕೇಳಿದಂತಿತ್ತವಳ ನೋಟ.. ನನ್ನ ಕರುಳು ಹಿಂಡಿದಂತಾಗುತ್ತಿತ್ತು.. ಅವಳು ನನ್ನ ಕಣ್ಣೊರೆಸುತ್ತಿದ್ದಳು. ಅಷ್ಟಾದರೂ ಅವಳಿಗೆ ನಿನ್ನ ಮೇಲೆ ಚೂರು ಸಿಟ್ಟಿರಲಿಲ್ಲ. ಕೊನೆಯ ಕ್ಷ್ಣಣದವರೆಗೂ ನೀನು ಬರಬಹುದೆಂಬ ಆಸೆ ಇತ್ತು. ಆ ಕಣ್ಣುಗಳಲ್ಲಿದ್ದುದ್ದು ಬೆಟ್ಟದಷ್ಟು ಪ್ರೀತಿ... ಆ ಪ್ರೀತಿಯ ಮೇಲೆ ಪುಟ್ಟ ನಂಬಿಕೆ, ಮತ್ತೆ ಒಂದಿಷ್ಟು ಕನಸುಗಳು.... ನೀನು ಎಲ್ಲವನ್ನೂ ಕ್ಷಣದಲ್ಲೆ ಛಿದ್ರ ಮಾಡಿಬಿಟ್ಟೆಯಲ್ಲ... ಸತಾಯಿಸಿ ಸತಾಯಿಸಿ ಅವಳ ಕಾಯುವಿಕೆಯನ್ನೆ ನಿಲ್ಲಿಸಿಬಿಟ್ಟೆಯಲ್ಲ... ಆದರೂ ಅವಳು ನಿನ್ನನ್ನು ನೋಯಿಸಲಾರಳು. ನಿನಗಾಗಿ ಕಾಯುವುದರಲ್ಲೇ ಅವಳಿಗೆ ಹಿತವಾದ ಸುಖವಿತ್ತು.. ಒಂದೇ ಒಂದು ದಿನ ನಿನ್ನ ಬಗ್ಗೆ ಸಿಟ್ಟು, ಕೆಟ್ಟ ಮಾತು ಅವಳ ಬಾಯಿಂದ ಬರಲಿಲ್ಲ. ಅದು ಕಣೋ ನಿಜವಾದ ಪ್ರೀತಿ. ತಾಯಿಯ ಪ್ರೀತಿ ಥರ ನಿಷ್ಕಲ್ಮಶ, ನಿಷ್ಕಾಮ ಪ್ರೀತಿ.. ನೀನು ಅವಳನ್ನು ಪ್ರೀತಿಸುವುದು ಅವಳಿಗೆ ಬೇಕಾಗಿತ್ತು, ಹಾಗಂತ ನೀನು ಪ್ರೀತಿಸದೆ ಇದ್ದರೂ ಅವಳು ನಿನ್ನನ್ನು ಪ್ರೀತಿಸುತ್ತಲೆ ಇರುತ್ತಿದ್ದಳು ಸದಾ.....
ನಾನು ನಿನಗೆ ಬೈದರೆ ನನ್ನ ಪ್ರಣತಿಯ ಹ್ರದಯ ಒಡೆದು ಹೋಗುತ್ತೆ. ನನ್ನ ಪ್ರಣತಿಗೋಸ್ಕರ ನಾನು ನಿನ್ನ ಕ್ಷಮಿಸಿದ್ದೇನೆ. ಕೂಡಲೇ ಹೊರಟು ಬಂದು ಬಿಡು ತಂಗಾಳಿಯ ಜೊತೆಗೇ... ನನ್ನ ಪ್ರಣತಿಯ ಕಣ್ಣಿನಲ್ಲಿದ್ದಂತೆ ಅವಳ ಫೋಟೊ ಎದುರಿಗೂ ಒಂದು ಪ್ರಣತಿ ಉರಿಯುತ್ತಿದೆ. ಅದರ ತುಂಬಾ ಪ್ರೀತಿ..... ಒಮ್ಮೆ ಬಂದು ಅವಳ ಆ ಪ್ರೀತಿ ತುಂಬಿದ ಮುಖ ನೋಡು, ಅದನ್ನು ಅನುಭವಿಸು... ಆಗ ನಿನ್ನ ಕಣ್ಣಿಂದ ಉದುರೋ ಪ್ರತಿ ಹನಿಯಲ್ಲೂ ಪ್ರಣತಿ ’ಮುತ್ತಾ’ಗಿ ಬರುತ್ತಾಳೆ ಗಗನ್.... ಪ್ಲೀಸ್... ನನ್ನ ಗೆಳತಿಯನ್ನು ಇನ್ನೂ ಸತಾಯಿಸಬೇಡ....
ಮುಂಜಾವ ಮಂಜಿನಲಿ ಇರುಳ ಬೆಳದಿಂಗಳಲಿ
ನೆಲ ಮುಗಿಲ ಒಲವ ಓಲೆ
ಕಲ್ಲು ಕೆತ್ತಿದ ಶಿಲ್ಪಿ ರೂಪ ಕೊಟ್ಟನು ಶಿಲೆಗೆ
ಈ ಮೌನ ಯಾರ ಕೊಡುಗೆ?
ಗಾಳಿಪಟ ಚಂದದಲಿ ಹಾರುತಿರೆ ಬಾನಿನಲಿ
ಬೀಸೊ ಗಾಳಿಗೆ ವಂದನೆ
ಬರಿಯ ಹಾಳೆಗೆ ಜೀವ ತುಂಬಿದ ಕಲೆಗಾರ ಎಂದು
ಜನ ಹೊಗಳಿರಲು ಕುಂಚ ಮೆಲುನಗೆ ನಕ್ಕಿತು
ಹಣತೆ ಹಚ್ಚಿತು ಎಂದು ನೆಮ್ಮದಿಯ ಉಸಿರು
ಬಿಡೆ ಗಾಳಿ ಬೀಸೆಚ್ಚರಿಸಿತು
ಮಳೆನೀರು ಭುವಿಗಿಳಿಯೆ ಕಣ್ ನೀರು ಹೊರಹರಿಯೆ
ಎದೆಯ ಗುದಿ ತಣ್ಣಗಾಯ್ತು
ಹೊಳೆವ ಮುತ್ತಿನ ಹನಿಯ ಈ ಕೊರಳ ಹಾರ
ಪ್ರತಿ ಮಳೆಗೆ ಇಳೆಗುಡುಗೊರೆ
ಹಾಡು ಮರೆತು ಹೋಯಿತೇನೆ ಜಾಣ ಕೋಗಿಲೆ
ಮಾತು ಮೌನವಾಯಿತೇನೆ ನಿನ್ನ ಕೊರಳಲೇ
ನೋವು ನಲಿವು ಹುದುಗಿತೇನೆ ನಿನ್ನ ಎದೆಯಲೇ
ಮನದ ಭಾವ ರಾಶಿಗೆಲ್ಲ ನೀಡಿ ರಾಗದ ರೂಪು
ಮನದ ತುಂಬ ರಂಗ ಬಳಿದ ನಿನ್ನ ಧ್ವನಿಯ ಇಂಪು
ಮತ್ತೆ ಕೇಳುವಾಸೆ ಒಮ್ಮೆ ಹಾಡೆ ಜಾಣ ಕೋಗಿಲೆ
ಯಾಕೀ ಮೌನ ಭಾವ ಶೂನ್ಯ ನೋಟಗಳು ಹೇಳೆಲೆ
ನಾಲಗೆಯಲಿ ಸಪ್ತ ಸ್ವರದ ನರ್ತನವು ನಿಂತರೂ
ನೀನು ಹಾಡ ಮರೆತರೂ ಮೌನದಲ್ಲೇ ಕುಳಿತರೂ
ಭಾವಕೆಲ್ಲ ಜೀವ ತುಂಬಿ ಮನಕೆ ತಂಪನೆರೆದ
ನಿನ್ನ ಯಾರೂ ಮರೆಯರು ಮತ್ತೆ ನೆನೆದೇ ನೆನೆವರು
